ಪುಣ್ಯಕೋಟಿ ಕೊಂದ ಹುಲಿ ಭೀಮಗಡದಿಂದ ಸ್ಥಳಾಂತರ..?
ಬೆಳಗಾವಿ, ಡಿ. 1: ಚಿಕ್ಕಮಗಳೂರಿನ ಪಡುವಾರಹಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಹುಲಿರಾಯ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡದಲ್ಲಿಯೂ ತನ್ನ ಚಾಳಿ ಮುಂದುವರಿಸಿದ್ದಾನೆ
ಗ್ರಾಮದ 2 ಹಸುಗಳನ್ನು ಹುಲಿ ಕೊಂದು ಹಾಕಿದ ಹಿನ್ನೆಲೆಯಲ್ಲಿ ಇಲ್ಲಿಂದ ಹುಲಿ ಸ್ಥಳಾಂತರಿಸಲು ಸುತ್ತಲಿನ ಗ್ರಾಮಸ್ಥರು ಪಟ್ಟು ಹಿಡಿದ್ದಾರೆ. ಆದ್ದರಿಂದ ಮತ್ತೆ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿ ಅನುಮತಿ ಕೋರಿದೆ. [ಮಹಿಳೆ ಕೊಂದಿದ್ದ ಹುಲಿ ಸೆರೆ]
ಪಡುವಾರಳ್ಳಿಯಲ್ಲಿ ಈ ಹುಲಿ ಆತಂಕ ಮೂಡಿಸಿತ್ತು. ಆಗ ಅದನ್ನು ಹಿಡಿದು ಖಾನಾಪುರ ತಾಲೂಕಿನ ಭೀಮಗಡ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು.
ಜನರಿಗೆ ಕೋಪ ಏಕೆ?: ಭೀಮಗಡದಲ್ಲಿ ಹುಲಿ ಬಿಡುವ ಮೊದಲು ಸುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ತಿಳಿಸಿರಲಿಲ್ಲ ಎಂದು ಜನರು ಆರೋಪಿಸಿದ್ದಾರೆ. ಇದರಿಂದ ಮುನ್ನಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈಗ ಗವಳಿ ಗ್ರಾಮದಲ್ಲಿ ಒಂಭತ್ತು ದಿನಗಳಲ್ಲಿ 2 ಹಸುಗಳು ಕಾಡು ಪ್ರಾಣಿಗಳ ದಾಳಿಗೆ ಪ್ರಾಣಬಿಟ್ಟಿವೆ. ಈ ಇದು ಹೊಸದಾಗಿ ಬಂದ ಹುಲಿರಾಯನದೇ ಕೃತ್ಯ ಎಂಬುದು ಸ್ಥಳೀಯರ ಅನುಮಾನ. [ಹಾರಿ ಪ್ರಾಣವ ಬಿಟ್ಟ ಹುಲಿಯ ನೆನೆಯುತ್ತಾ]
ಈ ಎಲ್ಲ ಕಾರಣಕಳಿಂದ ಅರಣ್ಯ ಇಲಾಖೆ ಮೇಲೆ ಜನ ಕ್ರುದ್ಧಗೊಂಡಿದ್ದಾರೆ. ಹುಲಿಯನ್ನು ಮತ್ತೆ ಹಿಡಿಯಬೇಕೆಂದು ಅಧಿಕಾರಿಗಳಿಗೆ ಘೇರಾವ್ ಹಾಕಿದ್ದ ಗ್ರಾಮಸ್ಥರು, ಇಲ್ಲಿಂದ ಹುಲಿ ಸ್ಥಳಾಂತರಿಸುವ ಭರವಸೆ ಸಿಕ್ಕ ಮೇಲೆಯೇ ಮನೆಗೆ ತೆರಳಿದ್ದರು. ಜನರೊಂದಿಗೆ ಕೈಜೋಡಿಸಿದ್ದ ಶಾಸಕ ಅರವಿಂದ ಪಾಟೀಲ ಕೂಡ, ಖಾನಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದರು. [ಗೋವಿನ ಹಾಡು, ಪುಣ್ಯಕೋಟಿಯ ಕಥೆಯಿದು]
ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅರಣ್ಯ ಇಲಾಖೆ ಮತ್ತೆ ಹುಲಿ ಹಿಡಿಯಲು ಮುಂದಾಗಿದೆ.
ಪಡವಾರಳ್ಳಿಯಲ್ಲಿ ಹಿಡಿದಿದ್ದ ಹುಲಿಯನ್ನು ಉತ್ತರ ಕನ್ನಡ ಜಿಲ್ಲೆಯ ಡಾಂಡೇಲಿ ಸಮೀಪದ ಅನಾಶಿಯಲ್ಲಿ ಬಿಡಲು ನಿರ್ಧರಿಸಲಾಗಿತ್ತು. ಆದರೆ, ನಂತರ ಒತ್ತಡ ಬಂದ ಹಿನ್ನೆಲೆಯಲ್ಲಿ ಭೀಮಗಡದಲ್ಲಿ ಬಿಡಲಾಗಿತ್ತು. ಆದ್ದರಿಂದ ಮತ್ತೆ ಅನಾಶಿಯಲ್ಲಿಯೇ ಹುಲಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ. [ಹುಲಿ ದಾಳಿಗೆ ರೈತ ಬಲಿ]
ಹುಲಿ ಚಲನೆ ಮೇಲೆ ನಿಗಾ: ಭೀಮಗಡದಲ್ಲಿ ಸಂಚರಿಸುತ್ತಿರುವ ಹುಲಿಯ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು, ಪಶು ವೈದ್ಯರು ಹಾಗೂ ಅರಣ್ಯ ಶಾಸ್ತ್ರಜ್ಞರು ನಿಗಾ ಇರಿಸಿದ್ದಾರೆ.
ಪ್ರಸ್ತುತ ಹುಲಿಯು ಗವಳಿ, ತಲವಡೆ ಹಾಗೂ ಮೈದ್ಯಿ ಗುಡ್ಡ ಪ್ರದೇಶಗಳಲ್ಲಿ ಸಂಚರಿಸುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.