ಮಕ್ಕಳ ಮದುವೆ ದಿನವೇ ಹೃದಯಾಘಾತದಿಂದ ತಂದೆ ಸಾವು
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅರಭಾವಿಯಲ್ಲಿ ತಮ್ಮಿಬ್ಬರು ಮಕ್ಕಳ ಮದುವೆ ಆದ ನಂತರ ಸಿದ್ದಪ್ಪ ಅಂತರಗಟ್ಟಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬುದು ಸಂಬಂಧಿಕರ ಆರೋಪ
ಗೋಕಾಕ, ಮಾರ್ಚ್ 17: ಇದೊಂದು ಕರುಣೆ ಹುಟ್ಟಿಸುವ ಪ್ರಕರಣ. ಮಕ್ಕಳಿಬ್ಬರ ಮದುವೆ ನಂತರ ಸಂಭ್ರಮ ಪಡಬೇಕಿದ್ದ ತಂದೆ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತನ್ನಿಬ್ಬರು ಮಕ್ಕಳ ಮದುವೆಯಲ್ಲಿ ಭಾಗಿಯಾಗಿದ್ದ ಗೋಕಾಕದ ದುರದುಂಡಿ ಗ್ರಾಮದ ಸಿದ್ದಪ್ಪ ಅಂತರಗಟ್ಟಿ (53) ಮೃತಪಟ್ಟವರು.
ಅರಭಾವಿ ಹತ್ತಿರದ ಪ್ರಭಾ ಶುಗರ್ಸ್ ಕಲ್ಯಾಣ ಮಂಟಪದಲ್ಲಿ ಸಿದ್ದಪ್ಪ ಅಂತರಗಟ್ಟಿ ಅವರ ಇಬ್ಬರು ಗಂಡುಮಕ್ಕಳ ಮದುವೆ ಗುರುವಾರ ಇತ್ತು. ಆ ಮದುವೆ ಮುಗಿಸಿಕೊಂಡು ಅರಭಾವಿಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಷ್ಟರಲ್ಲಿ ಸಿದ್ದಪ್ಪ ಮೃತಪಟ್ಟರು. ಈ ಮಧ್ಯೆ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.[ದೇಹದ ಸ್ವಾಧೀನ ಇಲ್ಲದ ರಘುರಾಮ್ ಸ್ಕೈ ಡೈವಿಂಗ್ ದಾಖಲೆ!]
ಸಿದ್ದಪ್ಪ ಅವರಿಗೆ ಹೆಂಡತಿ, ಮೂವರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಗಂಡುಮಕ್ಕಳ ಪೈಕಿ ವಿಠ್ಠಲ ಹಾಗೂ ಆನಂದ ಅವರ ಮದುವೆ ಗುರುವಾರ ನಡೆಯಿತು. ಮಕ್ಕಳಿಬ್ಬರ ಸಂಸಾರವನ್ನು ನೋಡಿ ಆನಂದಿಸಬೇಕಿದ್ದ ಸಿದ್ದಪ್ಪ ಅವರು ಮದುವೆಯ ದಿನವೇ ಮೃತಪಟ್ಟಿರುವುದು ಆ ಕುಟುಂಬಕ್ಕೆ ತೀವ್ರ ಆಘಾತ ತಂದಿದೆ.