ಡಿಸಿ ಕಚೇರಿಗಳಲ್ಲಿ ಕಾಗದ ರಹಿತ ವ್ಯವಸ್ಥೆ: ಕಾಗೋಡು
ಬೆಳಗಾವಿ, ನವೆಂಬರ್ 21: ಕೆಲವು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕಾಗದ ರಹಿತ ಕಚೇರಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ಡಿಸಿ ಕಚೇರಿಗಳಲ್ಲಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.
ಅಂದರೆ ಎಲ್ಲಾ ಕಡೆ ಗಣಕವನ್ನು ಅಳವಡಿಸಿ ಆದಷ್ಟು ಮಟ್ಟಿಗೆ ಕಾಗದದ ಬಳಕೆಯನ್ನು ಕಡಿಮೆ ಮಾಡಿ ಆನ್ ಲೈನ್ ಮೂಲಕ ವ್ಯವಹಾರ ನಡೆಯುವಂತೆ ಮಾಡುವುದೇ ಆಗಿದೆ.[ಅಧಿವೇಶನದಲ್ಲಿ ಪರಮೇಶ್ವರ್- ಈಶ್ವರಪ್ಪ ನಡುವೆ ವಾಕ್ಸಮರ]
ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಬಾಲಕೃಷ್ಣ ಸಿ ಎನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಗದಗ, ಕೊಪ್ಪಳ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗಳು ಸ್ವಯಂಪ್ರೇರಿತವಾಗಿ ಕಾಗದ ರಹಿತ ಕಚೇರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿವೆ. ವಿಜಯಪುರ, ರಾಯಚೂರು, ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಚೇರಿ ಚಿಕ್ಕಮಗಳೂರಿನಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಇನ್ನು 12 ಕಚೇರಿಗಳಲ್ಲಿ ಕಾಗದ ರಹಿತ ವ್ಯವಸ್ಥೆಯ ಅನುಷ್ಠಾನ ಅಂತಿಮ ಹಂತದಲ್ಲಿದೆ. ಉಳಿದ 28 ಕಚೇರಿಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಗದ ರಹಿತ ಕಚೇರಿಗಾಗಿ 2016ನೇ ಮಾರ್ಚಿನಲ್ಲಿ ರು 5ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿವರೆಗೆ 3.20ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.