ನಟ ಸುದೀಪ್ ಗಾಗಿ ಬೆಳಗಾವಿ ಹುಡುಗರ ಉಪವಾಸ, ಆಸ್ಪತ್ರೆಗೆ ದಾಖಲು
ನಟ ಸುದೀಪ್ ಹೆಬ್ಬುಲಿ ಚಿತ್ರದ ಪ್ರಚಾರಕ್ಕೆ ಬೆಳಗಾವಿಗೆ ಬರಬೇಕು ಎಂದು ಒತ್ತಾಯಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳಗಾವಿ ಹುಡುಗರು, ಸುದೀಪ್ ತಮ್ಮ ಹಳ್ಳಿಗೆ ಭೇಟಿ ನೀಡಬೇಕು ಎಂದು ಉಪವಾಸ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ
ಬೆಳಗಾವಿ, ಏಪ್ರಿಲ್ 13: ಹೆಬ್ಬುಲಿ ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕದಾದ್ಯಂತ ಪ್ರಚಾರ ಕೈಗೊಂಡಿದ್ದ ನಟ ಸುದೀಪ್ ಬೆಳಗಾವಿಗೆ ಬರಬೇಕು ಎಂದು ಒತ್ತಾಯಿಸಿ, ಕಳೆದ ತಿಂಗಳು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕರಿಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತಮ್ಮ ಗ್ರಾಮ ಭೂತರಾಮನಹಟ್ಟಿಗೆ ಸುದೀಪ್ ಬರಬೇಕು ಎಂದು ಒತ್ತಾಯಿಸಿ, ಉಪವಾಸ ಮಾಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಸುದೀಪ್ ಅಭಿಮಾನಿಗಳಾದ ಪ್ರವೀಣ ಪಾಟೀಲ, ಸಚಿನ್ ಪಾಟೀಲ ಎಂಬಿಬ್ಬರು ಯುವಕರನ್ನು ಸ್ಥಳೀಯರು ಹಾಗೂ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಮಾರ್ಚ್ 8ರಂದು ಪೆಟ್ರೋಲ್ ಬಾಟಲಿ ಹಿಡಿದು ಬಂದಿದ್ದ ಈ ಯುವಕರು, ಸುದೀಪ್ ಬೆಳಗಾವಿಗೆ ಬರಲೇಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು.[ಕಿಚ್ಚ ಸುದೀಪ್ ಗಾಗಿ ಸಾಯೋಕೆ ಹೊರಟಿದ್ದ ಹುಡುಗ್ರು ಪೊಲೀಸರ ವಶಕ್ಕೆ]
ಇಬ್ಬರನ್ನೂ ವಶಕ್ಕೆ ಪಡೆದಿದ್ದ ಪೊಲೀಸರು ಆ ನಂತರ ವಾಪಸ್ ಕಳುಹಿಸಿದ್ದರು. ಮಾಧ್ಯಮದ ಮೂಲಕ ಈ ಸುದ್ದಿ ನೋಡಿದ್ದ ಸುದೀಪ್, ಈ ಯುವಕರನ್ನು ಈಚೆಗೆ ಬೆಂಗಳೂರಿಗೆ ಕರೆಸಿಕೊಂಡು, 'ಹೀಗೆಲ್ಲ ಮಾಡಬಾರದು' ಎಂದು ಬುದ್ಧಿ ಹೇಳಿದ್ದರು. ಈಚೆಗೆ, 'ಸುದೀಪ್ ನಮ್ಮ ಗ್ರಾಮಕ್ಕೆ ಬರಬೇಕು. ಆ ವರೆಗೂ ಊಟ ಮಾಡುವುದಿಲ್ಲ' ಎಂದು ಪಟ್ಟು ಹಿಡಿದಿದ್ದ ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
"ನಾವು ಬೆಂಗಳೂರಿನಲ್ಲಿ ಸುದೀಪ್ ಅವರನ್ನು ಭೇಟಿ ಮಾಡಿದ್ದಾಗ ಬೆಳಗಾವಿಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಈವರೆಗೆ ಬರಲಿಲ್ಲ. ಬೆಳಗಾವಿಯಲ್ಲಿ ಹೆಬ್ಬುಲಿ ಚಿತ್ರ ಪ್ರದರ್ಶನವಾಗುತ್ತಿಲ್ಲ. ಇನ್ನೆಲ್ಲಿ ಅವರು ಬರಬೇಕು, ನಮ್ಮನ್ನು ಭೇಟಿಯಾಗಬೇಕು?" ಎಂದು ಸಚಿನ್ ಪಾಟೀಲ ಕಣ್ಣೀರು ಹಾಕಿದ್ದಾನೆ.