ಮಹಿಳೆಯರಿಗೆ ಹೊಡೆದ ಮೂವರು ಪೊಲೀಸರ ಅಮಾನತು
ಬೆಳಗಾವಿ, ಸೆಪ್ಟೆಂಬರ್, 05 : ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆಂಬ ಕಾರಣ ನೀಡಿ ಮಹಿಳೆಯರು ಎಂದೂ ನೋಡದೆ ಪೊಲೀಸರು ತಮ್ಮ ಮಾನವೀಯತೆಯನ್ನೇ ಮರೆದು ನಡುಬೀದಿಯಲ್ಲೇ ಮಹಿಳೆಯರಿಗೆ ಲಾಠಿಯಿಂದ ಥಳಿಸಿದ್ದಾರೆ.
ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಮಹಿಳೆಯರನ್ನು ಶುಕ್ರವಾರ ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.[ತುಮಕೂರು : ಮೀಟರ್ ಬಡ್ಡಿ ದಂಧೆ ತಡೆಯಲು ಸಹಾಯವಾಣಿ]
ಮಹಿಳೆಯರು ಬಂಧಿಸುವುದನ್ನು ವಿರೋಧಿಸಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇನ್ನು ಕೆಲವರು ತಪ್ಪಿಸಿಕೊಂಡು ಓಡಿಹೋಗಲು ಯತ್ನ ನಡೆಸಿದ್ದಾರೆ. ಹಾಗಾಗಿ ತಮ್ಮ ಹತೋಟಿಗೆ ಬಾರದ ಮಹಿಳೆಯರ ವಿರುದ್ಧ ಸಿಟ್ಟಿಗೆದ್ದ ಪೊಲೀಸರು ಲಾಠಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಮಹಿಳೆಯರ ಗೋಗರೆತವನ್ನು ಆಲಿಸದ ಮೂವರು ಕಾನ್ ಸ್ಟೇಬಲ್ ಗಳು ಇಂತಹ ಅಮಾನವೀಯ ಕೃತ್ಯಕ್ಕೆ ಮುಂದಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದ ಸಾರ್ವಜನಿಕರು ಪೊಲೀಸರ ಈ ಹೀನಾ ಕೃತ್ಯವನ್ನು ವಿಡಿಯೋ ಮಾಡಿ ಮಾಧ್ಯಮಗಳಿಗೆ ರವಾನಿಸಿದ್ದಾರೆ.
ಪೊಲೀಸರ ವರ್ತನೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ನಗರ ಪೊಲೀಸ್ ಆಯುಕ್ತ ಎಸ್.ವಿ ರವಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಮೂವರು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದಾರೆ.
ಎಂ.ಜಿ ಕುರೆಲ್, ಐ.ಎಸ್ ಪಾಟೀಲ್ ಮತ್ತು ಬಾಬಾ ನಾಗೋರ್ ಅವರನ್ನು ಅಮಾನತುಗೊಳಿಸಿದ ಪೊಲೀಸ್ ಆಯುಕ್ತ ರವಿ ಅವರು ವೇಶ್ಯಾವಾಟಿಕೆ ಕುರಿತು ವ್ಯಾಪಕ ದೂರುಗಳ ಬಂದ ಹಿನ್ನೆಲೆಯಲ್ಲಿ ಎಎಸ್ಐಯೊಬ್ಬರ ನೇತೃತ್ವದ ತಂಡ ಕಾನ್ ಸ್ಟೇಬಲ್ ಗಳೊಂದಿಗೆ ದಾಳಿ ಮಾಡಲಾಗಿತ್ತು ಎಂದು ಹೇಳಿದರು.