ಬೆಳಗಾವಿ : ಕಸಾಯಿಖಾನೆ ನಿರ್ಮಾಣದ ವಿರುದ್ಧ ಪ್ರತಿಭಟನೆ
ಬೆಳಗಾವಿ, ಅ.10 : ಬೆಳಗಾವಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಆಧುನಿಕ ಕಸಾಯಿಖಾನೆ ಆರಂಭ
ಬೆಳಗಾವಿಯ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. ಈ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಗುರುವಾರ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಮತ್ತು ವಿವಿಧ ಗ್ರಾಮಸ್ಥರು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಸಾಯಿ ಖಾನೆ ಆರಂಭ ಮಾಡುವುದರಿಂದ ಇಲ್ಲಿನ ಗೋಮಾಳ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಸಾಯಿಖಾನೆ ಸ್ಥಾಪನೆಯಾಗಲಿರುವ ಪ್ರದೇಶದ ಸುತ್ತ-ಮುತ್ತ ಫಲವತ್ತಾದ ಕೃಷಿ ಭೂಮಿ ಇದೆ. ಸಣ್ಣ ಹಿಡುವಳಿದಾರರು ಬೇಸಾಯ ಮಾಡುತ್ತಿದ್ದಾರೆ. ಯೋಜನೆ ಅನುಷ್ಠಾನಗೊಂಡರೆ ಈ ಪ್ರದೇಶದ ಪರಿಸರಕ್ಕೂ ಹಾನಿಯಾಗಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮದುಭರಮಣ್ಣವರ ಮಾತನಾಡಿ, 'ಗುಡ್ಡದ ಮಲ್ಲಪ್ಪನೆಂದೇ ಹೆಸರುವಾಸಿಯಾದ ದೇವಸ್ಥಾನ ಇಲ್ಲಿದೆ. ಮಳೆ ಬರಲಿ ಎಂದು ಪ್ರತಿವರ್ಷ ಇಲ್ಲಿ ನೂರಾರು ಜನರು ಬಂದು ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಪರಿಸರ ಮತ್ತು ಕೃಷಿ ಚಟುವಟಿಕೆಗೆ ಹಾನಿ ಮಾಡುವ ಈ ನಿರ್ಧಾರ ಕೈ ಬಿಡಬೇಕು' ಎಂದು ಒತ್ತಾಯಿಸಿದರು.