ಬೆಳಗಾವಿ: ಆನೆ ದಂತ, ಹುಲಿ ಚರ್ಮ ಸೇರಿ ಕೋಟ್ಯಂತರ ರುಪಾಯಿ ವಸ್ತು ವಶ
ಬೆಳಗಾವಿ, ಅಕ್ಟೋಬರ್ 12: ಅಕ್ರಮವಾಗಿ ವನ್ಯಜೀವಿ ವ್ಯಾಪಾರದಲ್ಲಿ ತೊಡಗಿದ್ದ ಪ್ರಕರಣವೊಂದನ್ನು ಭೇದಿಸಿರುವ ಹುಬ್ಬಳ್ಳಿ ಅಪರಾಧ ತನಿಖಾ ದಳದ ಪೊಲೀಸರು, ಬೆಳಗಾವಿ ನಗರದ ಶೆಟ್ಟಿಗಳ್ಳಿಯ ಮನೆಯೊಂದರಿಂದ ಅನೆ ದಂತಗಳು, ಪ್ರಾಣಿಗಳ ಕೊಂಬುಗಳು, ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಪೊಲೀಸರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಲೀಂ ಚಮಡೇವಾಲೆ ಎಂಬಾತನನ್ನು ಬಂಧಿಸಲಾಗಿದೆ.[ವಿದೇಶದಿಂದ ಚಿನ್ನ ಕಳ್ಳ ಸಾಗಾಟದಲ್ಲೂ ಭಟ್ಕಳದ ನಂಟು?]
ತನ್ನ ಮನೆಯ ಹತ್ತಿರದ ಮನೆಯೊಂದರಲ್ಲಿ ಈ ಎಲ್ಲ ವಸ್ತುಗಳನ್ನು ಇರಿಸಿದ್ದ ಆತ, ಅಲ್ಲಿ ಭೂತದ ಕಾಟವಿದೆ ಎಂದು ಸ್ಥಳೀಯ ಜನರನ್ನು ಹೆದರಿಸಿದ್ದ. ಆ ಮೂಲಕ ಅಲ್ಲಿ ಯಾರೂ ಸುಳಿದಾಡದಂತೆ ನೋಡಿಕೊಂಡಿದ್ದ.
ಆತ ರಾತ್ರಿ ವೇಳೆಯಲ್ಲಿ ಮನೆಗೆ ಬರುತ್ತಿದ್ದ. ಮನೆಯ ಮುಖ್ಯಬಾಗಿಲಿನ ಪಕ್ಕದಲ್ಲೇ ವಸ್ತುಗಳನ್ನು ಇರಿಸಿದ್ದ. ಎಸಿಪಿ ಶಂಕರ್ ಮಾರಿಹಾಳ್ ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ ಎರಡು ಜೊತೆ ಆನೆ ದಂತ, ಹುಲಿ, ಸಿಂಹ, ಜಿಂಕೆ, ಚಿರತೆ ಚರ್ಮ ಹಾಗೂ ಜಿಂಕೆ ಕೊಂಬು, ಹುಲಿ-ಸಿಂಹದ ಉಗುರನ್ನು ವಶಪಡಿಸಿಕೊಳ್ಳಲಾಗಿದೆ.[ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ ಸಿಸಿಬಿ]
ಆರೋಪಿ ಚಮಡೇವಾಲೆ ಈ ವಸ್ತುಗಳನ್ನು ಚೀನಾ, ವಿಯೆಟ್ನಾಂ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಗೊವಾ ಮೂಲಕ ಸಾಗಣೆ ಮಾಡುತ್ತಿದ್ದ. ಆತನ ಕುಟುಂಬದ ಇತರ ಸದಸ್ಯರು ಕೂಡ ವಾಹನ ಕಳ್ಳತನದಂಥ ಕೃತ್ಯಗಳಲ್ಲಿ ತೊಡಗಿದ್ದರು. ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.