ಮಂಗಳಮುಖಿಯರಿಂದ ಯುವಕನ ಮೇಲೆ ಬ್ಯಾಟ್ ನಿಂದ ಹಲ್ಲೆ
ನಾಯಂಡಹಳ್ಳಿ ಸುತ್ತಮುತ್ತ ಮಂಗಳಮುಖಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅಷ್ಟೇ ಅಲ್ಲ, ಅನೈತಿಕ ಚಟುವಟಿಕೆಗಳನ್ನು ಸಹ ನಡೆಸುತ್ತಿದ್ದಾರೆ. ಪೊಲೀಸರು ತನಿಖೆ ಮಾಡಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 7: ಕೇಳಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಾಯಂಡಹಳ್ಳಿ ಸಮೀಪದ ಟೋಟಲ್ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ನಡೆದಿದೆ. ಇದೇ ವೇಳೆ ಆತನ ಬಳಿ ಇದ್ದ ಸರ, ಮೊಬೈಲ್ ಫೋನ್ ನ ಸಹ ದೋಚಿದ್ದಾರೆ.
ಸ್ವಾಮಿ ಹಲ್ಲೆಗೊಳಗಾದ ಯುವಕ. ಬ್ಯಾಟರಾಯನ ಪುರ ಪೊಲೀಸರು ಸ್ಥಳಕ್ಕೆ ಬಂದು, ಮಂಗಳಮುಖಿಯರು ಹಾಗೂ ಗಾಯಾಳುವನ್ನು ಪೊಲೀಸ್ ಠಾಣೆ ಬಳಿಗೆ ಕರೆದೊಯ್ದರು. ಆದರೆ ಹಲ್ಲೆ ವಿಚಾರವನ್ನು ನಿರಾಕರಿಸಿರುವ ಪೊಲೀಸರು, ಯುವಕ ಬಿದ್ದು ಗಾಯಗೊಂಡಿದ್ದಾನೆ ಎಂದು, ಮಂಗಳಮುಖಿಯರನ್ನು ಬಿಟ್ಟು ಕಳಿಸಿದ್ದಾರೆ.[ಬೆಂಗಳೂರು: ಟೆಕ್ಕಿಯನ್ನು ದೋಚಿದ ಮಂಗಳಮುಖಿಯರು]
ನಾಯಂಡಹಳ್ಳಿ ಬಳಿ ಮರಳು ಲಾರಿಗಳನ್ನು ನಿಲ್ಲಿಸುವ ಸಾಲಿನಲ್ಲಿ ಮಲಗಲು ಆ ಯುವಕ ತೆರಳಿದ್ದ ವೇಳೆ, ಮಂಗಳಮುಖಿಯರು ಬಂದು ಹಣ ನೀಡುವಂತೆ ಕೇಳಿದ್ದಾರೆ. ಅದಕ್ಕೆ ಆ ಯುವಕ ತಿರಸ್ಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಂಗಳಮುಖಿಯರು, ಬ್ಯಾಟ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]
ಆತನನ್ನು ಕಾಪಾಡಲು ಮುಂದಾದ ಸಾರ್ವಜನಿಕರ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದಾರೆ. ಆ ನಂತರ ಸ್ಥಳಕ್ಕೆ ಬಂದ ಬ್ಯಾಟರಾಯನ ಪುರ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಪ್ರಕರಣ ಬಗ್ಗೆ ದೂರು ದಾಖಲಾಗಿದೆಯಾ ಎಂಬುದು ಖಚಿತವಾಗಿಲ್ಲ.