ಯಲಹಂಕ: ಬಿಜೆಪಿ ಸದಸ್ಯ ಉದ್ಯಮಿ ಕೊಲೆ, ನಾಲ್ವರ ಸೆರೆ
ಬೆಂಗಳೂರು, ಫೆ. 02: ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ವಡೇರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿಯವರ ಪತಿ, ರಿಯಲ್ ಎಸ್ಟೇಟ್ ಉದ್ಯಮಿ, ಬಿಜೆಪಿ ಮುಖಂಡ ಪುರುಷೋತ್ತಮ್ ಅವರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೆಲ ಗಂಟೆಗಳಲ್ಲೇ ನಾಲ್ವರು ಆರೋಪಿಗಳನ್ನು ಪೊಲೀಸರು ವಶಪಡೆದಿದ್ದಾರೆ.
ಬಂಧಿತರನ್ನು ವಿದ್ಯಾರ್ಥಿಗಳಾದ ಅನಿಲ್ (22), ಜಗದೀಶ್(21), ನಾಯಿ ತಳಿ ವ್ಯಾಪಾರಿ ನಕುಲ್(24), ನೀರಿನ ಟ್ಯಾಂಕರ್ ವಾಹನ ಚಾಲಕ ಕುಮಾರಸ್ವಾಮಿ (21) ಎಂದು ಗುರುತಿಸಲಾಗಿದೆ.
ಪುರುಷೋತ್ತಮ್ ಮೂಲತಃ ಚಿಕ್ಕಬಳ್ಳಾಪುರದವರು. ಬಹಳ ವರ್ಷಗಳ ಹಿಂದೆ ಯಲಹಂಕದ ಅಟ್ಟೂರು ಲೇಔಟ್ಗೆ ಬಂದು ನೆಲಸಿ ನವಜೀವನ ಲಕ್ಕಿ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆ ಮಾಡುತ್ತಿದ್ದರು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ರವರೊಂದಿಗೆ ಗುರುತಿಸಿಕೊಂಡು ಬಿಜೆಪಿ ಮುಖಂಡರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಕೃಷಿ ಚಟುವಟಿಕೆ, ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದರು.
ವೀರ್ಸಾಗರ್- ಅಟ್ಟೂರು ಬಳಿ ನಿವೇಶನದ ವಿಚಾರವಾಗಿ ಕೆಲವರೊಂದಿಗೆ ವೈಷಮ್ಯ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಇತ್ತೀಚೆಗೆ ಈ ನಾಲ್ವರು ಯುವಕರೊಡನೆ ಪುರುಷೋತ್ತಮ್ ಅವರು ಕಿತ್ತಾಡಿಕೊಂಡಿದ್ದರು. ಬಾರ್ ವೊಂದರಲ್ಲಿ ಕುಡಿಯುತ್ತಾ ಹುಡುಗರಿಗೆ ಬೆದರಿಕೆ ಹಾಕಿದ್ದರು. ಸಿಟ್ಟಿಗೆದ್ದ ಯುವಕರು ಪುರುಷೋತ್ತಮ್ ಅವರನ್ನು ಓಡಾಡಿಸಿಕೊಂಡು ಹೊಡೆದು ಹಾಕಿದ್ದಾರೆ ಎಂಬ ಸುದ್ದಿಯೂ ಇದೆ.
ರಾತ್ರಿ ಸುಮಾರು 10.30ರ ವೇಳೆಯಲ್ಲಿ ಊಟ ಮಾಡುವಾಗ ಫೋನ್ ಕರೆ ಬಂದಿದೆ, ತಕ್ಷಣ ಪುರುಷೋತ್ತಮ್ ಎರಡು ನಿಮಿಷದಲ್ಲಿ ಬರುತ್ತೇನೆ ಎಂದು ಹೊರ ಹೋದವರು ಹಿಂದಿರುಗಿರಲಿಲ್ಲ. ಪತ್ನಿ ಭಾರತಿ ಅವರು ಸುತ್ತ ಮುತ್ತ ಹುಡುಕಾಡಿದ್ದಾರೆ. ಸುಮಾರು 11 ರಿಂದ 12 ಗಂಟೆ ಸಮಯದಲ್ಲಿ ಯಾರೋ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಕಂಡು ಬಂದಿದೆ.ಸ್ಥಳಕ್ಕೆ ಡಿವೈಎಸ್ಪಿ ವಿಕಾಸ್ಕುಮಾರ್ ಮತ್ತು ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು, ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.