ರಾಜಲಕ್ಷ್ಮೀ ಜ್ಯುವೆಲರ್ಸ್ ದರೋಡೆ, ನೌಕರ ಸೇರಿ ನಾಲ್ವರ ಬಂಧನ
ಬೆಂಗಳೂರು, ಆಗಸ್ಟ್ 08 : ಯಲಹಂಕ ಬಳಿಯ ದ್ವಾರಕಾನಗರದ ರಾಜಲಕ್ಷ್ಮೀ ಜ್ಯುವೆಲರ್ಸ್ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜ್ಯುವೆಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಎಂಬಾತ ಸಹಚರರ ಜೊತೆ ಸೇರಿ ಈ ದರೋಡೆ ಮಾಡಿದ್ದ.
ಬಾಗಲೂರು ಠಾಣೆ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಜ್ಯುವೆಲರ್ಸ್ನಲ್ಲಿ ದೋಚಿದ್ದ ಸುಮಾರು 50 ಲಕ್ಷ ಮೌಲ್ಯದ ಆಭರಣಗಳನ್ನು ಮಾರಾಟ ಮಾಡಲು ಮುಂಬೈಗೆ ತೆಗೆದುಕೊಂಡು ಹೋಗಿರುವುದಾಗಿ ಆರೋಪಿಗಳು ಹೇಳಿದ್ದಾರೆ.[ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆಭರಣ ಅಂಗಡಿ ದರೋಡೆ]
ರಾಜಲಕ್ಷ್ಮೀ ಜ್ಯುವೆಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಮೂವರು ಸಹಚರರ ಜೊತೆ ಸೇರಿ ದರೋಡೆ ಸಂಚನ್ನು ರೂಪಿಸಿದ್ದ. ಜ್ಯುವೆಲರ್ಸ್ ಬಾಗಿಲು ತೆರೆಯುವ ವೇಳೆ, ಭದ್ರತಾ ಸಿಬ್ಬಂದಿಗಳು ಮುಂತಾದವುಗಳ ಬಗ್ಗೆ ಮಾಹಿತಿ ಇದ್ದ ಗೋಪಾಲ್ ದೊರೋಡೆಯ ಯೋಜನೆ ರೂಪಿಸಿದ್ದ. ಅದರಂತೆ ಆಗಸ್ಟ್ 5ರಂದು ಬೆಳಗ್ಗೆ ದರೋಡೆ ಮಾಡಲಾಗಿತ್ತು. [ಇಂದಿನ ಚಿನ್ನದ ದರ ತಿಳಿಯಿರಿ]
ಮೂರು ದಿನದಲ್ಲಿ ಸಿಕ್ಕಿಬಿದ್ದರು : ಯಲಹಂಕ ಬಳಿಯ ದ್ವಾರಕಾನಗರದ ರಾಜಲಕ್ಷ್ಮೀ ಜ್ಯುವೆಲರ್ಸ್ನಲ್ಲಿ ಆಗಸ್ಟ್ 5ರ ಮುಂಜಾನೆ 7.30ರ ಸುಮಾರಿಗೆ ದರೋಡೆ ನಡೆದಿತ್ತು. ಜ್ಯುವೆಲ್ಲರ್ಸ್ ಬಾಗಿಲು ತೆರೆಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಲಾಗಿತ್ತು.
ಬ್ಲಾಕ್ ಪಲ್ಸರ್ನಲ್ಲಿ ಬಂದ್ದಿದ್ದ ನಾಲ್ವರು, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಸಿಸಿಟಿವಿಯನ್ನು ಜಖಂಗೊಳಿಸಿ, ಸುಮಾರು 50 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದರು.