ಬಿಎಸ್ ವೈ- ಈಶ್ವರಪ್ಪ ಸಂಧಾನ ಸಭೆಯಲ್ಲಿ ಆರೆಸ್ಸೆಸ್ ನ ಮುಕುಂದ
ಬೆಂಗಳೂರು, ಜನವರಿ 27: ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ವೈಮನಸ್ಯ ತಾರಕಕ್ಕೇರಿದ್ದು, ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಒಗ್ಗೂಡಿಸುವ ಸಲುವಾಗಿ ಇಂದು (ಜ.27) ಸಂಜೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ.
ಇಬ್ಬರ ಮಾತಿನ ಸತ್ಯಾಸತ್ಯತೆ ಅರಿಯಲು ಬಿಜೆಪಿ ವರಿಷ್ಠರು ಆರ್ ಎಸ್ಎಸ್ ನ ಕರ್ನಾಟಕದ ಸಿ. ಆರ್. ಮುಕುಂದ(ಬೌದ್ಧಿಕ್ ಪ್ರಮುಖ್) ಅವರನ್ನು ಕರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ನಾಯಕರು ಮಧ್ಯಾಹ್ನದ ವೇಳೆಗೆ ದೆಹಲಿಯನ್ನು ತಲುಪಲಿದ್ದು, ಕೇಂದ್ರ ನಾಯಕರನ್ನು ಭೇಟಿ ಮಾಡಲಿದ್ದಾರೆ ಸಂಜೆ ಸಭೆ ನಡೆಯಲಿದೆ. ಸಭೆಯಲ್ಲಿ ಬ್ರಿಗೇಡ್ ಬೆಳವಣಿಗೆ, ಬಿನ್ನಮತೀಯರ ಬದಲಾವಣೆ, ಪದಾಧಿಕಾರಿಗಳ ಆಯ್ಕೆ, ಮುಂದಿನ ಚುನಾವಣೆಗೆ ಸಿದ್ಧತೆ, ಉಭಯ ನಾಯಕರ ವೈಮನಸ್ಯ ಶಮನ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈ ಸಭೆಯಲ್ಲಿ ಜಗದೀಶ್ ಶೆಟ್ಟರ್, ಕೇಂದ್ರ ಮಂತ್ರಿಗಳಾದ ಅನಂತ್ ಕುಮಾರ್. ಡಿ.ವಿ ಸದಾನಂದ ಗೌಡ, ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.[ಯಡಿಯೂರಪ್ಪ-ಈಶ್ವರಪ್ಪಗೆ ಅಮಿತ್ ಶಾರಿಂದ ಬುಲಾವ್]
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಆಗ್ಗಿಂದಾಗ್ಗೆ ವೈಮನಸ್ಯ ಹೆಚ್ಚಾಗಿದ್ದು, ಪಕ್ಷದಲ್ಲಿ ಬಿಎಸ್ ವೈ ಮತ್ತು ಯಡಿಯೂರಪ್ಪ ಬಣಗಳ ಸೃಷ್ಟಿಯಾಗಿವೆ ಈ ಹಿನ್ನೆಲೆ ಗಲಾಟೆ, ಜಗಳ, ಮುನಿಸು ಇತ್ಯಾದಿ ಹೆಚ್ಚಾಗಿದ್ದು, ರಾಜ್ಯದ ಕೇಂದ್ರ ಸಚಿವರಿಗೂ ಇರಿಸು ಮುರಿಸುಂಟಾಗಿದೆ. ಅಲ್ಲದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಕೇಂದ್ರಕ್ಕೆ ರಾಜ್ಯದ ಬೆಳವಣಿಗೆ ಬಗ್ಗೆ ತಿಳಿಸಿದ್ದಾರೆ. ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದಾರೆ.
ಆದರೆ ಉತ್ತರ ಭಾರತದ ಪಂಚರಾಜ್ಯಗಳ ಚುನಾವಣೆ ಸಂಬಂಧ ಕಾರ್ಯನಿರತವಾಗಿರುವ ಹೈಕಮಾಂಡ್ ಚುನಾವಣೆ ಬಳಿಕ ಪ್ರತಿಕ್ರಿಯಿಸಿವುದಾಗಿ ತಿಳಿಸಿತ್ತು. ಅಲ್ಲದೆ ತಮ್ಮ ರಾಜ್ಯದ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿತ್ತು. ಹಾಗೆಯೇ ನಾಯಕರು ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಪಕ್ಷದಲ್ಲಿ ಭಿನ್ನಮತ ಹೆಚ್ಚಾದ ಹಿನ್ನೆಲೆ ಇಂದು(ಜ.27) ಸಂಜೆ ಅಮಿತ್ ಶಾ ನೇತೃತ್ವದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ನವರ ನಡುವಿನ ವೈಮನಸ್ಯ ಪರಿಹಾರಕ್ಕೆ ಸಂಧಾನ ಸಭೆ ನಡೆಯಲಿದೆ.