ಜಯಾಗೆ ಕಾಡಿದ ರಾಹು ಕಾಲ ಯಮಗಂಡ ಕಾಲ!
ಬೆಂಗಳೂರು, ಅ. 18 : ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಶನಿವಾರ ಮಧ್ಯಾಹ್ನ ಹೊರಬರುತ್ತಿರುವ ಜಯಲಲಿತಾ ಪ್ರತಿಯೊಂದು ನಡೆಗೂ ಮುಹೂರ್ತ ಫಿಕ್ಸ್ ಮಾಡುತ್ತಿದ್ದಾರೆ. ಇದೇಕ್ಷಣ ಅವರಿಗೆ ಜೈಲಿನಿಂದ ಹೊರಬರಲು ಕೋರ್ಟ್ ಅನುಮತಿ ಪತ್ರ ನೀಡಿದರೂ ಅವರು ಹೊರಬರುವುದು ಮಧ್ಯಾಹ್ನ 3.30ರ ನಂತರವೇ.
ಅದೇಕೆಂದರೆ, ಕಾವೇರಿ ತೀರ್ಥೋದ್ಭವವಾದ ಮರುದಿನ ತುಲಾ ಸಂಕ್ರಮಣದಂದು ಮಧ್ಯಾಹ್ನ 1ರಿಂದ 3.30ರವರೆಗೆ ಯಮಗಂಡಕಾಲವಿರುವುದರಿಂದ, ಅವರ ರಾಜಕೀಯ ಭವಿಷ್ಯತ್ತಿನ ದೃಷ್ಟಿಯಿಂದ ಅವರು ಮಧ್ಯಾಹ್ನ 3.30ರ ನಂತರವೇ ಜೈಲಿನಿಂದ ಹೊರಗೆ ಕಾಲಿಡುವುದು ಶ್ರೇಯಸ್ಕರ ಎಂದು ಅವರ ಆಪ್ತ ಜ್ಯೋತಿಷಿ ಸಲಹೆ ನೀಡಿದ್ದಾರೆ.
ಹೀಗಾಗಿ, ಖುಷಿ ತಾಳಲಾರದೆ 'ಅಮ್ಮಾ ಎಂಗೆ, ಅಮ್ಮಾ ಎಂಗೆ ವರುವಾರ್' ಎಂದು ಹೊರಬಟ್ಟೆ ತೊಟ್ಟು ಆನಂದಭಾಷ್ಪ ಸುರಿಸುತ್ತ ಪರಪ್ಪನ ಅಗ್ರಹಾರದ ಸುತ್ತ ನೆರೆದಿರುವ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇನ್ನೂ ಕೆಲಹೊತ್ತು ಅಲ್ಲಿ ಠಿಕಾಣಿ ಹೂಡಬೇಕಾಗಿದೆ. [ಜಯಲಲಿತಾ ಬಿಡುಗಡೆ ಲೈವ್]
ಅಷ್ಟು ಮಾತ್ರವಲ್ಲದೆ, ಅವರು ಚೆನ್ನೈನ ಪೋಯೆಸ್ ಗಾರ್ಡನ್ ಪ್ರವೇಶಿಸಲು ಕೂಡ ಮುಹೂರ್ತ ನಿಗದಿಯಾಗಿದೆ. ಸೂರ್ಯಾಸ್ತವಾದ ನಂತರವೇ ಅವರು ಗೃಹ ಪ್ರವೇಶ ಮಾಡಬೇಕೆಂದು ಅದೇ ಜ್ಯೋತಿಷಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಯರಾಂ ಅವರಿಗೆ ಸೂಚನೆ ನೀಡಿದ್ದಾರೆ.
ಯಮಗಂಡಕಾಲದಲ್ಲಿ ಜೈಲಿಂದ ಹೊರಬಂದರೆ ಮತ್ತೇನಾದರೂ ಯಡವಟ್ಟಾದೀತೆಂದು ಜ್ಯೋತಿಷಿಗಳ ಲೆಕ್ಕಾಚಾರ. ಮತ್ತೊಂದು ವಿಚಾರವೆಂದರೆ, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ದಿನ ಕೂಡ ಜಯಲಲಿತಾ ಅವರು ನಿಗದಿಯಾಗಿದ್ದ 10.45ಕ್ಕೆ ನ್ಯಾಯಾಲಯ ಪ್ರವೇಶಿಸದೆ ರಾಹುಕಾಲದ ನಂತರ 10.50ಕ್ಕೆ ಪ್ರವೇಶಿಸಿ, ಐದು ನಿಮಿಷಗಳ ಕಾಲ ನ್ಯಾಯಾಧೀಶ ಕುನ್ಹಾ ಅವರು ಕಾಯುವಂತೆ ಮಾಡಿದ್ದರು. [ಕುಡ್ಲದ ನ್ಯಾಯಮೂರ್ತಿ ಕುನ್ಹಾ]
ಕಾವೇರಿಯಲ್ಲಿ ಜಯಾ ಮುಳುಗೇಳಲಿ : ಅ.18ರಿಂದ ತುಲಾ ಮಾಸ ಆರಂಭವಾಗಿದೆ. ತಮಿಳುನಾಡಿನ ಶ್ರೀರಂಗಂನಲ್ಲಿರುವ ಕಾವೇರಿ ನದಿಯಲ್ಲಿ ಈ ಮಾಸದಲ್ಲಿ ಮುಳುಗೆದ್ದು, ಸಪ್ತ ಪ್ರಾಕಾರ ಪ್ರದಕ್ಷಿಣೆ ಮಾಡಿ, ಶೇಷಶಯನ ರಂಗನಾಥನ ದರುಶನ ಮಾಡಿದರೆ ಏಳೇಳು ಜನ್ಮಗಳ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ಈ ನಿಟ್ಟಿನಲ್ಲಿ, ಜಯಲಲಿತಾ ಕೂಡ ತಮಿಳುನಾಡಿಗೆ ಹೋಗುತ್ತಿದ್ದಂತೆ, ತಮ್ಮದೇ ಕ್ಷೇತ್ರವಾಗಿರುವ ಶ್ರೀರಂಗಂನಲ್ಲಿ ಕನ್ನಡಿಗರ ಜೀವನಾಡಿ ಕಾವೇರಿಯಲ್ಲಿ ಮೂರು ಸಲ ಮುಳುಗುಹಾಕಲಿ.