ಶೂಟೌಟ್ ಪ್ರಕರಣ: ಐಸಿಯುನಲ್ಲಿ ಶ್ರೀನಿವಾಸ್, 70 ರೌಡಿಗಳ ವಿಚಾರಣೆ
ಬೆಂಗಳೂರು, ಫೆಬ್ರವರಿ 4: ಯಲಹಂಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 70 ರೌಡಿಶೀಟರ್ ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಯಲಹಂಕದ ಕೋಗಿಲು ಸಿಗ್ನಲ್ ಬಳಿ ಎಪಿಎಂಸಿ ಅಧ್ಯಕ್ಷ ಕಡುಬಲೆ ಶ್ರೀನಿವಾಸ್ ಕಾರಿನ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಕಾರಿನ ಗಾಜನ್ನು ಮುರಿದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.[ಬೆಂಗಳೂರಿನ ಯಲಹಂಕದಲ್ಲಿ ಹಾಡಹಗಲೇ ಶೂಟೌಟ್]
ಶ್ರೀನಿವಾಸ್ ಅವರಿಗೆ ಮೂರು ಗುಂಡು ತಗುಲಿ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಐಸಿಯುನಲ್ಲಿ ಅವರನ್ನು ಇರಿಲಾಗಿದ್ದು ವೈದ್ಯರು ಮೂರು ಗುಂಡುಗಳನ್ನು ತೆಗೆದಿದ್ದಾರೆ. ಗುಂಡು ಲೀವರ್ ಅನ್ನು ಡ್ಯಾಮೇಜ್ ಮಾಡಿದ್ದು ಶುಗರ್ ಇರುವ ಕಾರಣ ಶ್ರೀನಿವಾಸ್ ಕೋಮಾಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿದೆ.
ಇನ್ನು ಪೊಲೀಸರು ಈ ಪ್ರಕರಣ ಸಂಬಂಧ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬರುವ ಎಪತ್ತಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆಸಿ ಬ್ಲಾಕ್ ಪಲ್ಸರ್ ನಲ್ಲಿ ಬಂದ ರೌಡಿಗಳು ಯಾರು ಎಂಬುದರ ಕುರಿತು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಈ ರೌಡಿಶೀಟರ್ ಗಳಿಗೆ ಭೂಗತ ಲೋಕದ ನಂಟು ಇದೆಯೇ ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ.