ಉತ್ತರಾದಿಮಠದ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬೆಂಗಳೂರು, ಡಿಸೆಂಬರ್ 22 : ಬಸವನಗುಡಿಯ ಉತ್ತರಾದಿಮಠದ ಆವರಣದಲ್ಲಿರುವ ಬಾವಿಯಲ್ಲಿ ಸೋಮವಾರ ಸಂಜೆ ಸಿಕ್ಕ ಮಹಿಳೆಯ ಶವದ ಗುರುತು ಪತ್ತೆಯಾಗಿದೆ. ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವೂ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಡ್ಯ ಮೂಲದ ಸೀತಾಲಕ್ಷ್ಮೀ (45) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಮಠಕ್ಕೆ ಬಂದಿದ್ದ ಸೀತಾಲಕ್ಷ್ಮೀ ಅವರು 3 ಗಂಟೆ ಸುಮಾರಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. [ಗಂಡನ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನು ಕೊಂದಳೆ?]
ಸಂಜೆ 5ಗಂಟೆಯ ವೇಳೆಗೆ ಬಾವಿಗೆ ನೀರು ತರಲು ಹೋಗಿದ್ದ ಮಠದ ವಿದ್ಯಾರ್ಥಿಗಳು ಶವ ತೇಲುತ್ತಿರುವುದನ್ನು ನೋಡಿ ಮಠದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರು. ಮಠದವರು ನಂತರ ಶಂಕರಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಶವವನ್ನು ಹೊರತೆಗೆದಿದ್ದರು. [ನಟಿ ಜಿಯಾ ಖಾನ್ ಸಾವಿನ ಅಸಲಿ ರಹಸ್ಯ ಬಹಿರಂಗ]
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ಶವದ ಗುರುತು ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಪೊಲೀಸರು ಮಠದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಮೃತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರನಿಗೆ ಕರೆ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ...
ಮಠದ ಬಾವಿಯಲ್ಲಿ ಮಹಿಳೆಯ ಶವ ಪತ್ತೆ
ಬೆಂಗಳೂರಿನ ಬಸವನಗುಡಿಯ ಉತ್ತರಾದಿಮಠದ ಆವರಣದಲ್ಲಿರುವ ಬಾವಿಯಲ್ಲಿ ಸೋಮವಾರ ಸಂಜೆ ಮಹಿಳೆಯ ಶವ ಪತ್ತೆಯಾಗಿತ್ತು. ಮಂಗಳವಾರ ಶಂಕರಪುರ ಠಾಣೆಯ ಪೊಲೀಸರು ಶವದ ಗುರುತನ್ನು ಪತ್ತೆ ಹಚ್ಚಿದ್ದಾರೆ.
ಮೃತಪಟ್ಟ ಮಹಿಳೆ ಮಂಡ್ಯದವರು
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಡ್ಯ ಮೂಲದ ಸೀತಾಲಕ್ಷ್ಮೀ (45) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಮಠಕ್ಕೆ ಬಂದಿದ್ದ ಸೀತಾಲಕ್ಷ್ಮೀ ಅವರು, ನಂತರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೀತಾಲಕ್ಷ್ಮೀ ಅವರು ಮಠದ ಬಾವಿ ಬಳಿ ಸುತ್ತಾಡುತ್ತಿರುವುದು, ಅಲ್ಲಿರುವ ಜನರು ಹೋಗಲಿ ಎಂದು ಕಾದು ಕುಳಿತಿರುವುದು, ಬಾವಿಗೆ ಹಾರುತ್ತಿರುವುದು ಮುಂತಾದ ದೃಶ್ಯಗಳು ಬಾವಿಯ ಸಮೀಪದಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿವೆ.
'ಸ್ವರ್ಗಕ್ಕೆ ಹೋಗುತ್ತೇನೆ' ಎಂದು ಹೇಳಿದ್ದಳು
ಸೀತಾಲಕ್ಷ್ಮೀ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರ ಪ್ರಸಾದ್ ಅವರಿಗೆ ಕರೆ ಮಾಡಿದ್ದಳು. ವೈಕುಂಠ ಏಕಾದಶಿ ದಿನ ಮೃತಪಟ್ಟರೆ ಸೀದಾ ಸ್ವರ್ಗಕ್ಕೆ ಹೋಗಬಹುದು ಎಂದು ಹೇಳಿದ್ದಳು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ತಾಯಿ, ಪತಿ ಸಾವಿನಿಂದ ನೊಂದಿದ್ದಳು
ತಾಯಿ ಮತ್ತು ಪತಿಯನ್ನು ಕಳೆದುಕೊಂಡಿದ್ದ ಸೀತಾಲಕ್ಷ್ಮೀ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀತಾಲಕ್ಷ್ಮೀ ಅವರಿಗೆ ಮಕ್ಕಳಿರಲಿಲ್ಲ. ಮಂಡ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಉತ್ತರಾದಿಮಠದ ಸ್ಪಷ್ಟನೆ
'ಮಹಿಳೆಯ ಸಾವಿಗೂ ಮಠಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಮಠದ ವ್ಯವಸ್ಥಾಪಕ ಭಿಮೇಶ್ ಆಚಾರ್ಯ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಸೋಮವಾರ ಸಂಜೆಯೇ ಬಾವಿಯ ನೀರನ್ನು ಖಾಲಿ ಮಾಡಿ, ಪೂಜೆ ಮಾಡಿ, ಪುನಃ ನೀರು ಉಪಯೋಗಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.