ರೈತರು ಆತ್ಮಹತ್ಯೆ ಕಣ್ಮುಂದಿರುವಾಗ, ಹೇಗೆ ಕೇಕ್ ಕಟ್ ಮಾಡ್ಲಿ : ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಬಗ್ಗೆ ದೇವೇಗೌಡರ ಜತೆ ಚಿಂತನಗೋಷ್ಠಿ ಆಯೋಜಿಸಲಾಗಿತ್ತು.
ಬೆಂಗಳೂರು, ಮೇ 19: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಬಗ್ಗೆ ದೇವೇಗೌಡರ ಜತೆ ಚಿಂತನಗೋಷ್ಠಿ ಆಯೋಜಿಸಲಾಗಿತ್ತು. ಈ ಮೂಲಕ ಒಂದು ಅಪರೂಪದ ಹಾಗೂ ಉಪಯುಕ್ತ ಚರ್ಚೆಯ ಸರಣಿಗೆ ಇದು ಮುನ್ನುಡಿ ಬರೆದಿದೆ.
ಈ ಸಮಾರಂಭದಲ್ಲಿ ಮಾತನಾಡಿದ ದೇವೇಗೌಡರು, ರಾಜ್ಯದಲ್ಲಿ ರೈತರು ಬರದಿಂದ ಕಂಗೆಟ್ಟು ಸಾಯುವಾಗ ಕೇಕ್ ಕಟ್ ಮಾಡಿ ಸಂಭಮಿಸಲು ಸಾಧ್ಯವೇ? ಐಟಿ ಹುಡುಗರು ಒಂದು ಅರ್ಥಪೂರ್ಣ ಚರ್ಚೆ ಎಂದಿದ್ದಕೆ ಈ ಕಾರ್ಯಕ್ರಮ ಒಪ್ಪಿಕೊಂಡೆ ಎಂದರು.
ಸಮಾಜವಾದದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ದೇವೇಗೌಡರು, ಮಣ್ಣಿನ ಮಗ ಎನಿಸಿಕೊಂಡವರು. ಅಪಾರ ರಾಜಕೀಯ ಅನುಭವ, ನಿಪುಣತೆ ಮೂಲಕ 24/7 ರಾಜಕಾರಣಿಯಾಗಿರುವ ದೇವೇಗೌಡರ 84ನೇ ಹುಟ್ಟುಹಬ್ಬದ ಸಂಭ್ರಮವನ್ನುಮೇ 18ರಂದು ಸಂಭ್ರಮದಿಂದ ಆಚರಿಸಲಾಯಿತು.
ಮುನ್ನೋಟ, ಐಟಿ ಕನ್ನಡಿಗರ ಕೂಟದ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಈ ಚರ್ಚಾಕೂಟದಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ, ಹಿರಿಯ ಪತ್ರಕರ್ತರಾದ ಎನ್.ಎ.ಎಮ್ ಇಸ್ಮಾಯಿಲ್, ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಹಾಗೂ ಕಾಂಗ್ರೆಸ್ ನಾಯಕರಾದ ಬಿ.ಎಲ್.ಶಂಕರ್ ಮುಂತಾದವರು ಪಾಲ್ಗೊಂಡಿದ್ದರು.
ಕರ್ನಾಟಕ ಕೇಂದ್ರಿತ ರಾಜಕೀಯ ಚಿಂತನೆಯ ಅಗತ್ಯದ ಬಗ್ಗೆ ಕನ್ನಡ ಸಮಾಜದಲ್ಲಿ ಇಂದು ಎಂದಿಗಿಂತಲೂ ಹೆಚ್ಚಿನ ಚರ್ಚೆ, ಜಾಗೃತಿ ಏರ್ಪಡುತ್ತಿದೆ. ಈ ಬಗ್ಗೆ ಕನ್ನಡ ಸಮಾಜದಲ್ಲಿ, ಅದರಲ್ಲೂ ರಾಜಕೀಯ ವಲಯದಲ್ಲಿ ಇನ್ನಷ್ಟು ವ್ಯಾಪಕವಾದ ಚರ್ಚೆ, ವಿಚಾರ ವಿನಿಮಯ ರೂಪಿಸುವ ತುರ್ತು ಅಗತ್ಯ ನಮ್ಮ ಮುಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.