ರಸ್ತೆ ಗುಂಡಿಗೆ ಟೆಕ್ಕಿ ಬಲಿ: ಪತಿಯ ವಿರುದ್ಧ ಕೇಸು ಹಾಕಿದ್ದೇಕೆ?
ಬೆಂಗಳೂರು, ಸೆಪ್ಟೆಂಬರ್, 24 :ರಸ್ತೆ ಗುಂಡಿಗೆ ಬಲಿಯಾದ ಟೆಕ್ಕಿ ಸ್ತುತಿ ಪಾಂಡೆ ಪತಿಯ ವಿರುದ್ಧವೇ ಬೇಜವಾಬ್ದಾರಿ ವಾಹನ ಚಾಲನೆ ದೂರು ದಾಖಲು ಮಾಡಿಕೊಂಡಿರುವ ಬೆಂಗಳೂರು ಪೊಲೀಸರ ಕ್ರಮಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಚಾರ ಪೊಲೀಸ್ ಆಯುಕ್ತ ಡಾ. ಎಂ.ಎ ಸಲೀಂ, ರಸ್ತೆ ಅವಘಡಗಳಲ್ಲಿ ಪ್ರಾಣ ಹಾನಿಯಾದಾಗ ಚಾಲನೆ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದು ಸಾಮಾನ್ಯ. ಈ ನಿಮಿತ್ತ ಪತಿ ಓಮ್ ಪ್ರಕಾಶ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.[ಬೆಂಗಳೂರಿನ ಆರು ರಸ್ತೆಗಳಿಗೆ ವಿಸ್ತರಣೆ ಭಾಗ್ಯ]
ಕಳೆದ ಗುರುವಾರ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಸ್ತುತಿ ಪಾಂಡೆ (25) ಹಾಗೂ ಪತಿ ಓಮ್ ಪ್ರಕಾಶ್ ತ್ರಿಪತಿ (33) ಗಣೇಶ ಚತುರ್ಥಿ ಮುಗಿಸಿ ಮನೆಗೆ ವಾಪಾಸ್ಸಾಗುವ ವೇಳೆ ನಗರದ ಮಾರತ್ ಹಳ್ಳಿಯ ಸಮೀಪದ ರಸ್ತೆಯಲ್ಲಿ ಬೈಕ್ ಗೆ ಗುಂಡಿಯೊಂದು ಎದುರಾಗಿದೆ.
ಆಗ ಆತ ಎದುರಾದ ಗುಂಡಿಯನ್ನು ಬ್ರೇಕ್ ಹಾಕಿ ತಪ್ಪಿಸಲು ಮುಂದಾಗಿದ್ದಾನೆ. ಆದರೆ ಮೊದಲೇ ಗುಂಡಿ ಇಳಿದಿದ್ದ ಬೈಕ್ ಮೇಲಕ್ಕೆರುವಾಗ ಹಿಂದೆ ಕುಳಿತಿದ್ದ ಸ್ತುತಿ ರಸ್ತೆಗೆ ಬಿದ್ದಿದ್ದಾರೆ. ಬೈಕಿನಿಂದ ಬಿದ್ದ ಪರಿಣಾಮ ಸ್ತುತಿಯ ತಲೆಗೆ ತೀರಾ ಪೆಟ್ಟಾಗಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ತೆರಳುತ್ತಿರುವಾಗಲೇ ಸ್ತುತಿ ಸಾವನ್ನಪ್ಪಿದ್ದಾರೆ.
ಓಮ್ ಪ್ರಕಾಶ್ ನ ವಿಚಾರಣೆ ವೇಳೆ ತಪ್ಪು ಸಾಬೀತಾಗದಿದ್ದರೆ ಆತನನ್ನು ಈ ಆರೋಪದಿಂದ ಮುಕ್ತಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಬಂಧನಕ್ಕೆ ಒಳಪಡಿಸುವುದಿಲ್ಲ ಎಂದು ಜನರ ಆಕ್ರೋಶದ ಪ್ರಶ್ನೆಗಳಿಗೆ ಸಲೀಂ ಅವರು ಉತ್ತರ ನೀಡಿದ್ದಾರೆ.
ಈಗ ಘಟಿಸುತ್ತಿರುವ ಅವಘಡಗಳನ್ನು ಕೂಲಂಕಷವಾಗಿ ಗಮನಿಸಿದರೆ, ಅಪಘಾತಕ್ಕೆ ರಸ್ತೆಯಲ್ಲಿ ಹೆಚ್ಚಾಗಿರುವ ಗುಂಡಿಗಳೇ ಕಾರಣ ಎಂದು ತಿಳಿದು ಬರುತ್ತಿದೆ. ಹಾಗಾಗಿ ಬಿಬಿಎಂಪಿ ಹಾಗೂ ಬಿಡಿಎ ರಸ್ತೆಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ.