ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್
ಬೆಂಗಳೂರು, ಫೆಬ್ರವರಿ 10: ಗ್ರಾಮಾಂತರ ಪ್ರದೇಶಗಳಲ್ಲಿ ಗೃಹ ನಿರ್ಮಾಣಕ್ಕಾಗಿ ಎತ್ತಿನಗಾಡಿಗಳಲ್ಲಿ ಮರಳು ಸಾಗಣೆ ಮಾಡುವವರಿಗೆ ಪೊಲೀಸರಿಂದ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಮರಳು ಸಾಗಿಸುವ ಎತ್ತಿನ ಗಾಡಿಗಳಿಗೆ ಅವಕಾಶ ಕಲ್ಪಿಸಬೇಕು. ಈ ವೇಳೆ ಯಾವುದೇ ಕ್ರಮ ಜರುಗಿಸಿದಿರಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಶಾಸಕರಾದ ಕೆ.ಎನ್.ರಾಜಣ್ಣ ಕೆ. ಎಸ್.ಪುಟ್ಟಣ್ಣಯ್ಯ, ಚಿಕ್ಕಮಾದು, ಸಾ.ರಾ.ಮಹೇಶ್ ಅವರು ಗುರುವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.[ಅಕ್ರಮ ಮರಳು ಸಾಗಣೆ : ರಾಜ್ಯಾದ್ಯಂತ ಸಿಐಡಿ ತನಿಖೆ]
ಮನೆ ಕಟ್ಟಿಕೊಳ್ಳಲು ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವಾಗ ಅವರನ್ನು ತಡೆದು ಪೊಲೀಸರು ಹಿಂಸಿಸಿ, ಬಂಧಿಸುತ್ತಿದ್ದಾರೆ ಎಂದು ಶಾಸಕರು ದೂರಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವವರಿಗೆ ಪೊಲೀಸರಿಂದ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎತ್ತಿನ ಗಾಡಿಯಲ್ಲಿ ಮರಳು ಸಂಗ್ರಹಣೆ ಮಾಡಿ ನಂತರ ನಗರ ಪ್ರದೇಶಗಳಿಗೆ ಸಾಗಿಸುವ ಹುನ್ನಾರವೇನಾದರೂ ಇದೆಯೇ ಎಂದು ನಾಗರಿಕರು ಯೋಚಿಸುತ್ತಿದ್ದಾರೆ.