ರಾಜ್ಯದ 'ಮಹಾ' ಮಳೆಗೆ ಪಶ್ಚಿಮ ಘಟ್ಟ ಕಾರಣ
ಬೆಂಗಳೂರು, ನ. 15: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಭವಿಸುವ ಭಾರೀ ಮಳೆಗೆ ಕರ್ನಾಟಕದ ಹೆಮ್ಮೆಯ ಪಶ್ಚಿಮ ಘಟ್ಟಗಳೇ ಕಾರಣ.
ಹೀಗೆಂದು ಅಭಿಪ್ರಾಯಪಟ್ಟಿದ್ದಾರೆ ಬೆಂಗಳೂರಿನ ಐಐಎಸ್ಸಿ ಸಂಸ್ಥೆಯ ಇಬ್ಬರು ಸಂಶೋಧಕರು. ಪಶ್ಚಿಮ ಘಟ್ಟಗಳ ಭಾರೀ ಗುಡ್ಡ ಪ್ರದೇಶಗಳು ಮೋಡಗಳಿಗೆ ತಡೆಯೊಡ್ಡುತ್ತವೆ. ಇದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ಭಾರೀ ಮಳೆಗೆ ಕಾರಣವಾಗುತ್ತಿವೆ. ಆದರೆ, ಈ ಅಂಶವನ್ನು ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡುವಾಗ ಪರಿಗಣಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಳೆದ 14 ವರ್ಷಗಳ ಮಳೆ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು ಹಾಗೂ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್, ಡೆಹ್ರಾಡೂನ್ ಸಂಸ್ಥೆಗಳು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮೂರು ಭಾರೀ ಮಳೆಯಾಗುವ ಸ್ಥಳಗಳನ್ನು ಗುರುತಿಸಿವೆ. ಆದರೆ, ಕೇರಳ ಹಾಗೂ ತಮಿಳುನಾಡಿನಲ್ಲಿ ಇಂತಹ ಒಂದೂ ಸ್ಥಳ ಕಂಡುಬಂದಿಲ್ಲ. [ಶಿರಸಿ ಸೋಂದಾ ಮಠದಲ್ಲಿ ಕೆರೆ ಸಮ್ಮೇಳನ]
ಗುಡ್ಡ ಪ್ರದೇಶಗಳಿಗೆ ಶಕ್ತಿಯುತ ಗಾಳಿಯು ಅಪ್ಪಳಿಸಿದಾಗ ಮೋಡಗಳು ಪಶ್ಚಿಮ ಘಟ್ಟಗಳಿಗಿಂತ ಮೇಲಕ್ಕೆ ಹೋಗಲು ಆರಂಭಿಸುತ್ತವೆ. ಇದು ಭಾರೀ ಮಳೆ ಬೀಳಲು ಕಾರಣವಾಗುತ್ತವೆ. ಬೇಸಿಗೆಯ ಮಾರ್ಚ್ ಮತ್ತು ಮೇ ತಿಂಗಳುಗಳಲ್ಲಿ ಪಶ್ಚಿಮ ಘಟ್ಟಗಳು ಬಿಸಿಯಾಗುತ್ತವೆ. ಈ ಮೂಲಕ ಸಮುದ್ರ ಪ್ರದೇಶದಿಂದ ತೇವಾಂಶ ಭರಿತ ಗಾಳಿಯನ್ನು ಆಕರ್ಷಿಸುತ್ತವೆ. ಇದು ಜೂನ್ ಹಾಗೂ ಜುಲೈ ತಿಂಗಳಲ್ಲಿ ಭಾರೀ ಮಳೆಯಾಗಲು ಕಾರಣವಾಗುತ್ತವೆ. ಮಳೆಯ ನಂತರ ಉಷ್ಣಾಂಶದ ವ್ಯತ್ಯಾಸವು ಕಡಿಮೆಯಾಗುತ್ತದೆ ಮತ್ತು ದೊಡ್ಡ ಮೋಡದ ರಚನೆಗಳು ಕರಗುತ್ತವೆ.