ಇನ್ನಾದರೂ ಸತ್ಯರಾಜ್ ಬಾಯಿ ಭದ್ರವಾಗಿರಲಿ: ವಾಟಾಳ್ ನಾಗರಾಜ್
ಸತ್ಯರಾಜ್ ಇನ್ನು ಮುಂದೆ ಕನ್ನಡದ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಲಿ, ಬಾಯಿಯನ್ನು ಭದ್ರವಾಗಿರಿಸಿಕೊಳ್ಳಲಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು, ಏಪ್ರಿಲ್ 22: ಬಾಹುಬಲಿ-2 ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ಹೋರಾಟಕ್ಕೆ ಇಂದು ತೆರೆಬಿದ್ದಿದೆ. ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಸತ್ಯರಾಜ್ ಕ್ಷಮೆ ಕೇಳಿದ್ದರಿಂದಾಗಿ ಈ ಹೋರಾಟವನ್ನು ಕೈಬಿಡುವುದಾಗಿ ತಿಳಿಸಿದ್ದಾರೆ.
ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ನಮ್ಮ ಬೇಸರವೇನಿದ್ದರೂ ಕನ್ನಡಿಗರ ಬಗ್ಗೆ ಸತ್ಯರಾಜ್ ಆಡಿದ ಮಾತುಗಳ ಮೇಲೆ. ಅವರು ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿದ್ದನ್ನು ಪರಿಗಣಿಸಿ ನಮ್ಮ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.[ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ತಡೆ ಇಲ್ಲ: ಸಾ.ರಾ. ಗೋವಿಂದು]
ಆದರೆ ಸತ್ಯರಾಜ್ ಇನ್ನು ಮುಂದೆ ಕನ್ನಡದ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಲಿ, ಬಾಯಿಯನ್ನು ಭದ್ರವಾಗಿರಿಸಿಕೊಳ್ಳಲಿ ಎಂದಿರುವ ಅವರು ತಮಿಳು ನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ನಿಂತರೆ, ಇಲ್ಲಿ ತಮಿಳು ಚಿತ್ರ ಮತ್ತು ಮಾಧ್ಯಮವನ್ನೂ ಬಂದ್ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.