ವ್ಯಾಸರಾಯ ಮಠ ಸ್ವಾಮೀಜಿ ಪಿಎ ವಂಚನೆ ಪ್ರಕರಣದಲ್ಲಿ ಅರೆಸ್ಟ್
ಬೆಂಗಳೂರು, ನವೆಂಬರ್ 25: ವ್ಯಾಸರಾಯರ ಮಠದ ಪೀಠಾಧ್ಯಕ್ಷರಾದ ವಿದ್ಯಾಮನೋಹರ ತೀರ್ಥರ ಆಪ್ತ ಸಹಾಯಕ ಪ್ರಕಾಶ್ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ. ಚೆನ್ನೈನಲ್ಲಿ ಅತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ರಾಜಾಜಿ ನಗರದಲ್ಲಿರುವ ವ್ಯಾಸ ರಾಯರ ಮಠದಲ್ಲಿ ಪ್ರಕಾಶ್ ನನ್ನು ಪೊಲೀಸರು ವಶಕ್ಕೆ ಪಡೆದರು.
ಚೆನ್ನೈನಲ್ಲಿರುವ ಸೋಸಲೆ ವ್ಯಾಸರಾಯರ ಮಠದಲ್ಲಿ 23 ಲಕ್ಷ ರುಪಾಯಿಯನ್ನು ಪ್ರಕಾಶ್ ವಂಚಿಸಿದ್ದಾರೆ ಎಂದು ಅಲ್ಲಿನ ಆಡಳಿತಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ದರಿಂದ ಬೆಂಗಳೂರು ಪೊಲೀಸರ ನೆರವಿನೊಂದಿಗೆ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಎಂಟು ವರ್ಷದಿಂದ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಆಪ್ತ ಸಹಾಯಕನಾಗಿ ಪ್ರಕಾಶ್ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ. ವ್ಯಾಸರಾಯರ ಮಠದ ಪೀಠದಿಂದ ವಿದ್ಯಾಮನೋಹರ ತೀರ್ಥರನ್ನು ಕೆಳಗಿಳಿಸಬೇಕು ಎಂದು ಅ ಮಠದ ಭಕ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಠಕ್ಕೆ ಸರಕಾರವೇ ಆಡಳಿತಾಧಿಕಾರಿಯನ್ನೂ ನೇಮಿಸಿದೆ. ಈ ಮಧ್ಯೆ ವಿದ್ಯಾಮನೋಹರ ತೀರ್ಥರು ಶಿಷ್ಯರೊಬ್ಬರನ್ನು ನೇಮಿಸಿದ್ದರು. ಒಟ್ಟಾರೆ ವ್ಯಾಸರಾಯ ಮಠದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ಹಾಗೂ ಕೋರ್ಟ್ ಕೇಸುಗಳು ನಡೆಯುತ್ತಿವೆ.