ವಿಜಯನಗರ ಮೆಟ್ರೋ ಮಾರ್ಗಕ್ಕೆ ಹಂಪೆಯ ಕಲಾಸ್ಪರ್ಶ!
ಮೆಟ್ರೋ ರೈಲು ಮಾರ್ಗಗಳನ್ನು ಸೌಂದರ್ಯೀಕರಣಗೊಳಿಸುವ ಯೋಜನೆಯಲ್ಲಿ ವಿಜಯ ನಗರ ಮಾರ್ಗದ ಕಲಾ ಸ್ಪರ್ಶದ ಪರಿಕಲ್ಪನೆ ಎರಡನೇ ಯೋಜನೆ.
ಬೆಂಗಳೂರು, ಜನವರಿ 26: ಉದ್ಯಾನ ನಗರಿಯ ವಿಜಯನಗರದ ಮೂಲಕ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ರೈಲು ಮಾರ್ಗಕ್ಕೆ ಕರ್ನಾಟಕದ ಗತವೈಭವವಾದ ವಿಜಯನಗರ ಸಾಮ್ರಾಜ್ಯದ ಶಿಲ್ಪ ಕಲಾ ವೈಭವದ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗಿನ ಮೆಟ್ರೋ ಮಾರ್ಗ ಹಾಗೂ ಆ ಮಾರ್ಗದಲ್ಲಿ ಬರುವ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯ ನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಮೈಸೂರು ರಸ್ತೆ - ಈ ಆರೂ ನಿಲ್ದಾಣಗಳಲ್ಲಿ ವಿಜಯ ನಗರ ವಾಸ್ತು ಶಿಲ್ಪವನ್ನು ಬಿಂಬಿಸುವ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗುವುದು ಎಂದು ಮೆಟ್ರೋದ ಮೂಲಗಳು ತಿಳಿಸಿವೆ.
ಅಂದಹಾಗೆ, ಬೆಂಗಳೂರಿನ ಮೆಟ್ರೋ ಮಾರ್ಗಕ್ಕೆ ಇಂಥದ್ದೊಂದು ಕಲಾ ಸ್ಪರ್ಶ ನೀಡುವ ಪ್ರಯತ್ನ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ, ಬೈಯ್ಯಪ್ಪನ ಹಳ್ಳಿ ಯಿಂದ ಎಂ.ಜಿ. ರಸ್ತೆ ನಡುವಿನ ಮೆಟ್ರೋ ಮಾರ್ಗವನ್ನು ಸುಂದರಗೊಳಿಸಲಾಗಿದೆ.
ಅದೇ ರೀತಿ, ವಿಜಯನಗರ ಮೆಟ್ರೋ ಮಾರ್ಗಕ್ಕೂ ಸೌಂದರ್ಯದ ಸ್ಪರ್ಶ ನೀಡಲು ನಿರ್ಧರಿಸಲಾಗಿತ್ತು. ಆದರೆ, ಇದರ ಹೆಸರೇ ವಿಜಯ ನಗರ ಮಾರ್ಗವಾಗಿರುವುದರಿಂದ ಇದಕ್ಕೆ ಹಂಪೆಯ ಶಿಲ್ಪ ಕಲಾ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ.
ವಿಜಯ ನಗರ ಮಾರ್ಗದ ಸೌಂದರ್ಯೀಕರಣಕ್ಕೆ ಸುಮಾರು 15 ಕೋಟಿ ರು. ಖರ್ಚಾಗಲಿದ್ದು, ಈ ಖರ್ಚನ್ನು, ನಮ್ಮ ಮೆಟ್ರೋ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಭರಿಸಲಿವೆ.