ಕಳಸಾ-ಬಂಡೂರಿ: ಸೆಪ್ಟೆಂಬರ್ 26 ಕರ್ನಾಟಕ ಬಂದ್
ಬೆಂಗಳೂರು, ಆಗಸ್ಟ್, 22 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆನೀಡಿದ್ದಾರೆ.
ಹುಬ್ಬಳ್ಳಿ, ಧಾರವಾಡ ಮತ್ತು ಗದಗ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಇರುವ ಈ ಯೋಜನೆ ಕುರಿತಾಗಿ ಯಾವುದೇ ಬೆಳವಣಿಗೆಗಳು ಕಾಣದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರ ಶನಿವಾರದಂದು ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.[ಕೇಳುವವರೇ ಗತಿಯಿಲ್ಲದ ಕಳಸ ಬಂಡೂರಿ!]
ಯೋಜನೆ ಜಾರಿ ವಿಚಾರದಲ್ಲಿ ಇರುವ ಅನುಮಾನಗಳನ್ನು ಗೋವಾ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಶೀಘ್ರವೇ ಪರಿಹರಿಸಿಕೊಳ್ಳಲು ಮುಂದಾಗಬೇಕು. ಈ ಯೋಜನೆ ಜಾರಿ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಸಾಕಷ್ಟು ತೊಂದರೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಅತಿಶೀಘ್ರವಾಗಿ ಜಾರಿಗೆ ತರಲು ಒತ್ತಾಯಿಸುವ ಸಲುವಾಗಿ ಬಂದ್ ನಡೆಸಲು ತೀರ್ಮಾನ ಮಾಡಿದ್ದೇವೆ. ರಾಜ್ಯದ ಯಾವುದೇ ಭಾಗದ ನೆಲ, ಜಲಕ್ಕೆ ಧಕ್ಕೆಯಾದರೂ ಕನ್ನಡ ಒಕ್ಕೂಟ ಅದರ ವಿರುದ್ಧ ದನಿ ಎತ್ತುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಏನಿದು ಕಳಸ-ಬಂಡೂರಿ ಯೋಜನೆ?
ಉತ್ತರ ಕರ್ನಾಟಕ ನಾಲ್ಕು ನದಿಯ 40 ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಸಿ ನೀರಿನ ಬವಣೆ ತಪ್ಪಿಸಲು ಮಹದಾಯಿ ನದಿಯ ನೀರನ್ನು ಕಳಸಾ ಬಂಡೂರ ನಾಲೆಗಳ ಮೂಲಕ ಮಲಪ್ರಭ ನದಿಗೆ ಹರಿಸುವ ಕಾಮಗಾರಿಯನ್ನು ಕರ್ನಾಟಕ ಕೈಗೆತ್ತಿಕೊಂಡಿತ್ತು.
ಎರಡೂ ನಾಲೆಗಳಲ್ಲಿ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗೆ 2003ರಲ್ಲಿ ಸುಮಾರು 100 ಕೋಟಿ ಮಂಜೂರಾಗಿತ್ತು. ಈ ಯೋಜನೆ ಮೂಲಕ ಸುಮಾರು 7.56 ಟಿಎಂಸಿ ಯಷ್ಟು ನೀರನ್ನು ಕಳಸ ಬಂಡೂರ ನಾಲಾ ಯೋಜನೆ ಮೂಲಕ ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿತ್ತು.