ಸ್ಕೈವಾಕ್ ಇರುವುದು ನಿಮಗಾಗಿ, ಪಾದಚಾರಿಗಳೇ ಬಳಸಿ
ಉಪಾಹಾರ ದರ್ಶಿನಿ ಬಳಿ ನಿರ್ಮಿಸಲಾಗಿರುವ ಲಿಫ್ಟ್ ಕೂಡ ಇರುವ ಅತ್ಯಾಧುನಿಕ ಸ್ಕೈವಾಕ್ ಅನ್ನು ಎಷ್ಟು ಜನರು ಬಳಸುತ್ತಿದ್ದಾರೆ? ಎಣಿಸಿ ನೋಡಿದರೆ ಬೆರಳೆಣಿಕೆಯಷ್ಟೂ ಜನರು ಸಿಗುವುದಿಲ್ಲ. ಇಡೀ ದಿನ ಸ್ಕೈವಾಕ್ ಭಣಗುಡುತ್ತಿರುತ್ತದೆ.
ಬೆಂಗಳೂರು, ಏಪ್ರಿಲ್ 01 : ಅಪ್ಪಂದಿರಾ ಅಣ್ಣಂದಿರಾ, ಅಕ್ಕತಂಗಿಯರೆ, ಬಂಧುಬಗಿನಿಯರೆ, ಸಾಫ್ಟ್ ವೇರ್ ಇಂಜಿನಿಯರುಗಳೇ, ಕಾಲೇಜು ವಿದ್ಯಾರ್ಥಿನಿಯರೆ, ಪಡ್ಡೆ ಹುಡುಗರೆ... ದಯವಿಟ್ಟು ಈ ಸ್ಕೈವಾಕ್ ಮಾಡಿರುವುದು ನಿಮ್ಮೆಲ್ಲರಿಗಾಗಿ, ಇದನ್ನು ದಯವಿಟ್ಟು ಬಳಸಿ, ರಸ್ತೆಯಲ್ಲಿ ಬೇಕಾಬಿಟ್ಟಿ ಅಡ್ಡಾಡಬೇಡಿ....
ಎಂದು ಜಯನಗರದ 3ನೇ ಬ್ಲಾಕ್ ನಲ್ಲಿ ದಿನನಿತ್ಯ ಅಡ್ಡಾಡುವ ನಾಗರಿಕರಿಗಾಗಿ ಕೇಳಿಕೊಳ್ಳುವಂಥ ಪ್ರಸಂಗ ಎದುರಾಗಿದೆ. ಇದು ಏಕೆಂದರೆ, ಜನವರಿ 31ರಂದು ವರಕವಿ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರ 121ನೇ ಜನ್ಮದಿನಾಚರಣೆಯಂದು ಉದ್ಘಾಟಿಸಲಾದ ಎಲಿವೇಟೆಡ್ ಸ್ಕೈವಾಕ್ ಅನ್ನು ಎಷ್ಟು ಜನ ಬಳಸುತ್ತಿದ್ದಾರೆ? [ದಕ್ಷಿಣ ಭಾರತದ ಮೊದಲ 'ಎಲಿವೇಟೆಡ್ ಸ್ಕೈವಾಕ್' ವಿಶೇಷತೆಗಳೇನು ಗೊತ್ತಾ?]
ಉಪಾಹಾರ ದರ್ಶಿನಿ ಬಳಿ ನಿರ್ಮಿಸಲಾಗಿರುವ ಲಿಫ್ಟ್ ಕೂಡ ಇರುವ ಅತ್ಯಾಧುನಿಕ ಸ್ಕೈವಾಕ್ ಅನ್ನು ಎಷ್ಟು ಜನರು ಬಳಸುತ್ತಿದ್ದಾರೆ? ಎಣಿಸಿ ನೋಡಿದರೆ ಬೆರಳೆಣಿಕೆಯಷ್ಟೂ ಜನರು ಸಿಗುವುದಿಲ್ಲ. ಇಡೀ ದಿನ ಸ್ಕೈವಾಕ್ ಭಣಗುಡುತ್ತಿರುತ್ತದೆ. ಸಾಕಷ್ಟು ವಾಹನ ಸಂಚಾರವಿದ್ದರೂ ದುಡುದುಡು ಓಡಿಕೊಂಡು ರಸ್ತೆಯನ್ನೇ ಜನ ಬಳಸುತ್ತಿದ್ದಾರೆ.
ಇದು ಜಯನಗರದ ಕಥೆ ಮಾತ್ರವಲ್ಲ. ಬೆಂಗಳೂರಿನಾದ್ಯಂತ ನಿರ್ಮಿಸಲಾಗಿರುವ ಹಲವಾರು ಸ್ಕೈವಾಕ್ ಗಳನ್ನು ಬಳಸುವುದಕ್ಕೆ ಪಾದಚಾರಿಗಳಿಗೆ ಏನೋ ಬಿಗುಮಾನ, ಏಕೋ ಸೋಂಬೇರಿತನ. [ಈ ಟ್ರಾಫಿಕ್ ಪೊಲೀಸ್ ತೋರಿದ ಮಾನವೀಯತೆ ಎಂತದ್ದು ನೋಡಿ!]
ಇದನ್ನು ಮನಗಂಡಿರುವ ಸಂಚಾರಿ ಪೊಲೀಸರು ಸ್ಕೈವಾಕ್, ಝೀಬ್ರಾ ಕ್ರಾಸಿಂಗ್, ಸಬ್ ವೇಸ್ ಬಳಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಭಾಗವಹಿಸಿ, ಸ್ಕೈವಾಕ್ ನಲ್ಲಿ ತೆಗೆದಿರುವ ಅತ್ಯುತ್ತಮ ಸೆಲ್ಫಿಗೆ ಬಹುಮಾನ ನೀಡಲಾಗುವುದು ಎಂದು ಪಾದಚಾರಿಗಳನ್ನು ಪೊಲೀಸರು ಕೇಳಿಕೊಳ್ಳುತ್ತಿದ್ದಾರೆ.
ಈ ಅಭಿಯಾನಕ್ಕೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಕೂಡ ಬೆಂಬಲ ಸೂಚಿಸಿ ಸೆಲ್ಫಿ ಕಳಿಸಿದ್ದಾರೆ. ಸ್ಕೈವಾಕ್ ಗಳನ್ನು ನಿರ್ಮಿಸಲಾಗಿರುವುದು ಪಾದಚಾರಿಗಳ ಸುರಕ್ಷತೆಗಾಗಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಕೂಡ ಟ್ವಿಟ್ಟರ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬರೀ ಇಂಥ ಅಭಿಯಾನ ಮಾಡಿ ಪ್ರಯೋಜನವಿಲ್ಲ. ಸ್ಕೈವಾಕ್ ಬಳಸದೆ ರಸ್ತೆಯನ್ನು ಬೇಕಾಬಿಟ್ಟಿ ದಾಟುವವರಿಗೆ ಮುಲಾಜಿಲ್ಲದೆ ಸಂಚಾರಿ ಪೊಲೀಸರು ದಂಡ ವಿಧಿಸಬೇಕು. ಆಗ ಮಾತ್ರ ಈ ಅಭಿಯಾನಕ್ಕೆ ಒಂದು ಅರ್ಥ ಬರುತ್ತದೆ.