ನರೇಂದ್ರ ಮೋದಿ ಸಮರ್ಥ ಆಡಳಿತಗಾರ : ತುಳಸಿ ವಿಶ್ವಾಸ
ಬೆಂಗಳೂರು, ಡಿ. 22: ನರೇಂದ್ರ ಮೋದಿ ಅವರಿಗೆ ಸ್ಪಷ್ಟ ಗುರಿ ಇದೆ. ಯೋಜನಾಬದ್ಧವಾಗಿ ಮುನ್ನಡೆಯುವ ಸಾಮರ್ಥ್ಯವಿದೆ...
ಇದು ಪ್ರಧಾನಿ ಮೋದಿ ಕುರಿತು ಅಮೆರಿಕದ ಕಾಂಗ್ರೆಸ್ನ ಪ್ರಥಮ ಹಿಂದೂ ಪ್ರತಿನಿಧಿ ತುಳಸಿ ಗಬ್ಬಾರ್ಡ್ ವ್ಯಕ್ತಪಡಿಸಿದ ವಿಶ್ವಾಸ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. [ಅಮೆರಿಕ ಕಾಂಗ್ರೆಸ್ ಹಿಂದೂ ಸದಸ್ಯೆ ತುಳಸಿಗೆ ಆಹ್ವಾನ]
ಅಮೆರಿಕದ ಟೈಮ್ ಸ್ಕೇರ್ನಲ್ಲಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರೊಂದಿಗೆ ನಡೆಸಿದ ಸಭೆಯ ಮೂಲಕ ತಾವು ಭಾರತದ ಭವಿಷ್ಯ ರೂಪಿಸುವ ಕುರಿತು ಸ್ಪಷ್ಟ ಯೋಜನೆ ಹೊಂದಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ, ಅಲ್ಲಿ ಸೇರಿದ್ದವರಿಗೂ ಮೋದಿ ಅವರ ಮಾತಿನಲ್ಲಿ ವಿಶ್ವಾಸ ಮೂಡಿದೆ. ಆದ್ದರಿಂದಲೇ ಅಲ್ಲಿದ್ದ ಜನ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ ನೀಡಿದರು ಎಂದು ತುಳಸಿ ಅಭಿಪ್ರಾಯಪಟ್ಟರು. [ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಬಾಂಧವ್ಯ ಬೆಸುಗೆ]
ಯೋಗ ದಿನ : ನರೇಂದ್ರ ಮೋದಿ ಅವರ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯ ಯೋಗ ದಿನವನ್ನು ಘೋಷಿಸಿರುವುದು ಭಾರತಕ್ಕೊಂದು ಹೆಮ್ಮೆಯ ವಿಷಯ. ನಾನೂ ಯೋಗಾಭ್ಯಾಸ ಮಾಡುತ್ತೇನೆ. ನಿತ್ಯ ಭಕ್ತಿ ಯೋಗ ಹಾಗೂ ಕರ್ಮ ಯೋಗ ಮಾಡುತ್ತೇನೆ ಎಂದು ತಿಳಿಸಿದರು.
ಶ್ರೀ ಕೃಷ್ಣ ಜೈಕಾರದೊಂದಿಗೆ ಮಾತು ಆರಂಭಿಸಿದ್ದ ತುಳಸಿ ತಾವು ಶ್ರೀಕೃಷ್ಣನ ಭಕ್ತೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.
ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಆದರೆ, ನಾನೋರ್ವ ಕೃಷ್ಣ ಭಕ್ತೆ. ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದ್ದರಿಂದ ವೃಂದಾವನ ಸೇರಿದಂತೆ ಇತರ ತೀರ್ಥ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆಂದು ತುಳಸಿ ತಿಳಿಸಿದರು. [ನರೇಂದ್ರ ಮೋದಿಗೆ ಅಮೆರಿಕದಲ್ಲಿ ಅದ್ದೂರಿ ಸ್ವಾಗತ]
ಸಂಬಂಧ ವೃದ್ಧಿಸಲಿ : ಇದಕ್ಕೂ ಮೊದಲು ಬೆಂಗಳೂರು ಐಟಿ ಹಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತುಳಸಿ ಗಬಾರ್ಡ್, ಭಾರತ ಹಾಗೂ ಅಮೆರಿಕ ಸಂಬಂಧ ಇನ್ನಷ್ಟು ಬಲಗೊಳ್ಳಬೇಕು ಎಂದು ಆಶಿಸಿದರು.
ಪ್ರಸ್ತುತ ಭಾರತ ಮತ್ತು ಅಮೆರಿಕ ಸಂಬಂಧ ಅತ್ಯಂತ ದೃಢವಾಗಿದೆ. ಅಮೆರಿಕವು ಜಗತ್ತಿನ ಉಳಿದೆಲ್ಲ ದೇಶಗಳಿಗಿಂತ ಭಾರತದೊಂದಿಗೆ ಹೆಚ್ಚು ಒಪ್ಪಂದಗಳನ್ನು ಹೊಂದಿದೆ. ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದುವಾಗ ದೇಶದ ಭದ್ರತೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ದೇಶದ ಭದ್ರತೆಯು ಆರ್ಥಿಕ ಬೆಳವಣಿಗೆಗೂ ಕಾರಣವಾಗುತ್ತದೆ. ಆದ್ದರಿಂದ ಭಾರತ ಅಭಿವೃದ್ಧಿ ಹೊಂದಲು ದೇಶದ ಆಂತರಿಕ ಭದ್ರತೆಯನ್ನು ಬಿಗಿಗೊಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿ. ನಾಗರಾಜ್, ಗಿರಿಧರ್ ಉಪಾಧ್ಯ, ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ಮುಂತಾದವರು ಪಾಲ್ಗೊಂಡಿದ್ದರು.