ಸೀಗೇಹಳ್ಳಿ ಕೆರೆ ದತ್ತು ಸ್ವೀಕರಿಸಿದ ಯುನೈಟೆಡ್ ವೇ ಬೆಂಗಳೂರು
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಯೋಜನಾರಹಿತ ನಗರೀಕರಣದಿಂದಾಗಿ ಕೆರೆಗಳು ನರಳುತ್ತಿವೆ. 1985ರಲ್ಲಿ ಐವತ್ತೊಂದರಷ್ಟಿದ್ದ ಶುದ್ಧ ಕೆರೆಗಳ ಸಂಖ್ಯೆ ಹದಿನೇಳಕ್ಕೆ ಕುಸಿದಿದೆ.
ಬೆಂಗಳೂರು, ಡಿಸೆಂಬರ್ 2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯು ಮೂರು ವರ್ಷಗಳ ಅವಧಿಗೆ ಸೀಗೇಹಳ್ಳಿ ಕೆರೆಯನ್ನು ದತ್ತು ಪಡೆದಿರುವುದಾಗಿ ಘೋಷಿಸಿದೆ. ವೇಕ್ ದ ಲೇಕ್ ಅಭಿಯಾನದಡಿಯಲ್ಲಿ ಕೆರೆಯನ್ನು ದತ್ತು ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಯೋಜನಾರಹಿತ ನಗರೀಕರಣದಿಂದಾಗಿ ಕೆರೆಗಳು ನರಳುತ್ತಿವೆ. 1985ರಲ್ಲಿ ಐವತ್ತೊಂದರಷ್ಟಿದ್ದ ಶುದ್ಧ ಕೆರೆಗಳ ಸಂಖ್ಯೆ ಹದಿನೇಳಕ್ಕೆ ಕುಸಿದಿದೆ. ಇತ್ತೀಚೆಗೆ ಕೆರೆಗಳ ನಿರ್ವಹಣೆ ಬಗ್ಗೆ ಸರಕಾರದ ಸಂಸ್ಥೆಗಳು ಪ್ರಯೋಗಕ್ಕೆ ಇಳಿದಿವೆ. ಅದರ ಪ್ರಕಾರ ತೆಗೆದುಕೊಂಡ ತೀರ್ಮಾನದಿಂದ ಕೆರೆ ಅಭಿವೃದ್ಧಿ ಪ್ರಾಧಿಕಾರವು ತನ್ನ ಕೆಲಸದಲ್ಲಿ ಸಾರ್ವಜನಿಕರನ್ನು ಗಣನೆಗೆ ತೆಗೆದುಕೊಳ್ಳುತ್ತಿದೆ.[ಕೌದೇನಹಳ್ಳಿ ಕೆರೆಗೆ ಮರಳಿವೆ ಚೆಂದದ ಪಕ್ಷಿಗಳು...]
ಸೀಗೇಹಳ್ಳಿ ಕೆರೆಯು ಮೂವತ್ತೆರಡು ಎಕರೆ ವ್ಯಾಪ್ತಿಯಲ್ಲಿದ್ದು, ಕೆ.ಆರ್.ಪುರಂ ಬಳಿ ಇದೆ. ಸದ್ಯಕ್ಕೆ ಕೆರೆಯ ಒಳ ಹಾಗೂ ಹೊರ ಭಾಗದಲ್ಲಿ ಬೇಲಿ ಹಾಕುವ ಕೆಲಸಕ್ಕೆ ಬಿಡಿಎ ಚಾಲನೆ ಕೊಟ್ಟಿದೆ. ಒಳಚರಂಡಿಯನ್ನು ಬೇರೆಡೆ ತಿರುಗಿಸಲಾಗಿದೆ. ನಡಿಗೆ ಪಥದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಮನೀಶ್ ಮೈಕಲ್ ಮಾತನಾಡಿ, ನಾವು ಜೀವಿಸುತ್ತಿರುವ ಈ ಸಮಾಜದಲ್ಲಿ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದೀವಿ. ಸರಕಾರ, ಸಮಾಜ, ಕಾರ್ಪೋರೇಟ್ ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕೆರೆಯ ಜೀರ್ಣೋದ್ಧಾರ ಕಾರ್ಯಕ್ರಮವು ನಾವು ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೇವೆ ಎಂಬುದಕ್ಕೆ ಉದಾಹರಣೆ ಎಂದರು.[ಕೌದೇನಹಳ್ಳಿ ಕೆರೆ ಆವರಣದಲ್ಲಿ ದೀಪೋತ್ಸವದ ಸಂಭ್ರಮ]
ಡೆಲ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಸರ್ವ್ ಸರವಣನ್, ಬಿಬಿಎಂಪಿಯ ಜಗನ್ನಾಥ್ ರಾವ್ ಮತ್ತಿತರರು ಈ ಕೆರೆ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದರು.