ಕನ್ನಡ ಎಸ್ಸೆಂಎಸ್ ಬಳಕೆಗೆ ಸರ್ಕಾರದಿಂದ ತಂತ್ರಾಂಶ
ಬೆಂಗಳೂರು, ಸೆ. 18: ಬಹುಬಳಕೆಯ ಮಾಧ್ಯಮವಾದ ಮೊಬೈಲ್ನಲ್ಲಿ ಕನ್ನಡ ಬಳಕೆ ಹೆಚ್ಚಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಯುನಿಕೋಡ್ ಶಿಷ್ಟತೆಯನ್ನು ಒಳಗೊಂಡ ತಂತ್ರಾಂಶವನ್ನು ಸೆ. 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಯಾವುದೇ ಕಂಪನಿಯ ಫೋನ್ನಲ್ಲಿ ಕನ್ನಡ ಲಿಪಿಯೊಂದಿಗೆ ಸಂಪರ್ಕ ಸಾಧಿಸಲು ಈ ತಂತ್ರಾಂಶ ಸಹಾಯ ಮಾಡುತ್ತದೆ. ಕನ್ನಡದಲ್ಲೇ ಸಂದೇಶಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಸಾಧ್ಯತೆಗಳನ್ನು ಈ ತಂತ್ರಾಂಶದಲ್ಲಿ ತೆರೆದಿಡಲಾಗಿದೆ.
ಈ ತಂತ್ರಾಂಶಗಳನ್ನು ಅಧಿಕೃತವಾಗಿ ಕರ್ನಾಟಕ ಸರ್ಕಾರವು ಲೋಕಾರ್ಪಣೆಗೊಳಿಸುತ್ತಾ, ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಯೂನಿಕೋಡ್ ತಂತ್ರಾಂಶವನ್ನೇ ಬಳಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಮತ್ತು ಈ ಕುರಿತು ಅಗತ್ಯ ತರಬೇತಿಗಳನ್ನು ನೀಡಲಾಗುವುದು ಎಂದು ಇಲಾಖೆ ಪ್ರಕಟಿಸಿದೆ.[ಯೂನಿಕೋಡ್ ಶಿಷ್ಟತೆ ಫಲ, ಕನ್ನಡ ಎಸ್ಸೆಂಎಸ್ ಭಾಗ್ಯ]
ಇದಲ್ಲದೆ, ಕರ್ನಾಟಕದ ಸಾಂಸ್ಕೃತಿಕ ಉತ್ಸವಗಳನ್ನು ಕುರಿತು ಮೊಬೈಲ್ ಆಪ್ ಸಿದ್ಧಪಡಿಸಿದ್ದು, ಪ್ರತಿಯೊಂದು ಉತ್ಸವಗಳ ಸಾಂಸ್ಕೃತಿಕ ಹಿನ್ನಲೆ, ಆಚರಿಸುವ ಸ್ಥಳ, ಜಿಲ್ಲೆ, ಆಚರಿಸುವ ಬಗೆ ಮತ್ತು ಅದರ ವೈಶಿಷ್ಟ್ಯತೆಯನ್ನು ನೀಡಲಾಗಿದೆ.ಉತ್ಸವದ ಇತಿಹಾಸ ಮತ್ತು ಪರಂಪರೆ, ಧಾರ್ಮಿಕ ಪ್ರಾಮುಖ್ಯತೆ, ಸಾಮಾಜಿಕ ಪ್ರಸ್ತುತತೆ, ಈ ಸ್ಥಳಕ್ಕೆ ತಲುಪುವ ಬಗೆ ಹೇಗೆ ಎಂಬ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗಿದೆ.
ಇದರಿಂದ ರಾಜ್ಯದ ಸಾಂಸ್ಕೃತಿಕ ತಾಣಗಳು ಮತ್ತು ಉತ್ಸವಗಳ ಮಹತ್ವವು ಇಲಾಖೆಯ ಜಾಲತಾಣದಲ್ಲಿ ವಿಶ್ವದಾದ್ಯಂತ ಪರಿಚಿತವಾಗುವುದಲ್ಲದೆ ವಿಶ್ವದಾದ್ಯಂತ ಬರುವ ಪ್ರವಾಸಿಗರಿಗೆ ಈ ಸ್ಥಳಗಳ ಪ್ರಾಮುಖ್ಯತೆ, ಉತ್ಸವಗಳು ನಡೆಯುವ ಕಾಲಮಾನ ಮತ್ತು ಅಲ್ಲಿಗೆ ಹೋಗಲು ಇರುವ ಸಾಧ್ಯತೆಗಳ ವಿವರಗಳನ್ನೆಲ್ಲಾ ಸುಲಭವಾಗಿ ಒದಗಿಸಿದಂತಾಗುತ್ತದೆ. [ಕುವೆಂಪು ತಂತ್ರಾಂಶ ಆವೃತ್ತಿ 2.0]
ಇದರಿಂದ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದಂತೆಯೂ ಆಗುತ್ತದೆ ಎಂಬ ಸದಾಶಯ ಇಲಾಖೆಯದ್ದಾಗಿದೆ. ಇದು ಆಂಡ್ರಾಯ್ಡ್ ಅಲ್ಲದೆ ವಿಂಡೋಸ್ ಎಚ್ ಟಿಎಂಎಲ್ 5ನಲ್ಲಿ ಲಭ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.