ಡಿ ಕೆ ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ಕಾರ್ಪೋರೇಟರುಗಳು
ಬೆಂಗಳೂರು, ಸೆ 9: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಬಿಬಿಎಂಪಿ ಚುನಾಯಿತ ಸದಸ್ಯರೊಬ್ಬರು ಮತ್ತು ಸದಸ್ಯೆಯೊಬ್ಬರ ಪತಿ, ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಗಣನೆ ನಡೆಯುತ್ತಿರುವ ಈ ಸಮಯದಲ್ಲಿ, ಮಂಗಳವಾರ (ಸೆ 8) ಇಬ್ಬರು ಬಿಜೆಪಿ ಮುಖಂಡರು ಸಚಿವರ ಸದಾಶಿವನಗರ ನಿವಾಸದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಹಲವಾರು ರಾಜಕೀಯ 'ಸಂಶಯ'ಕ್ಕೆ ಎಡೆ ಮಾಡಿಕೊಟ್ಟಿದೆ. (ಮೇಯರ್: ಬುಧವಾರ ಹೈಕೋರ್ಟಿನಲ್ಲಿ ವಿಚಾರಣೆ)
ಭೇಟಿ ಮಾಡಿದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ, ಕ್ಷೇತ್ರಕ್ಕೆ ಸಂಬಂಧಪಟ್ಟ ಅಭಿವೃದ್ದಿ ವಿಚಾರದ ಬಗ್ಗೆ ಸಚಿವರನ್ನು ಮಾತನಾಡಿಸಲು ನಾವು ಹೋಗಿದ್ದು ಎಂದು ಇಬ್ಬರೂ ಸಮಜಾಯಿಷಿ ನೀಡಿದ್ದಾರೆ.
ವಿಜಯನಗರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಹಂಪಿ ನಗರ ವಾರ್ಡಿನ (ವಾರ್ಡ್ ನಂ. 133) ಜನಪ್ರತಿನಿಧಿ ಆನಂದ್ ಹೊಸೂರ್ ಮತ್ತು ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಮಾರೇನಹಳ್ಳಿ (ವಾರ್ಡ್ ನಂ. 125) ವಾರ್ಡಿನ ಚುನಾಯಿತ ಜನಪ್ರತಿನಿಧಿ ಮಧುಕುಮಾರಿ ಅವರ ಪತಿ ವಾಗೇಶ್, ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ.
ಗಮನಿಸ ಬೇಕಾದ ಅಂಶವೇನಂದರೆ, ಈ ಎರಡೂ ಕ್ಷೇತ್ರ ಬಿಜೆಪಿಯ ಹಿರಿಯ ಮುಖಂಡ ವಿ ಸೋಮಣ್ಣ ಪ್ರಾಭಲ್ಯದ್ದು. ಸೋಮಣ್ಣ ಮತ್ತು ಆರ್ ಅಶೋಕ್ ನಡುವೆ ಬಿಬಿಎಂಪಿ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ನಡೆದ ಬೆಳವಣಿಗೆಯಲ್ಲಿ ಕೆಲವೊಂದು ರಾಜಕೀಯ ಮನಸ್ತಾಪ ಇತ್ತು ಎನ್ನುವ ಮಾತಿರುವುದು. (ಅಶೋಕ್ ವಿರುದ್ದ ತಿರುಗಿ ಬಿದ್ದರೇ ನಗರದ ಶಾಸಕರು)
ಡಿಕೆಶಿ ಭೇಟಿ ಮಾಡಿದ ಇಬ್ಬರು ಹೇಳಿದ್ದೇನು? ಬಿಜೆಪಿಯೂ ರೆಸಾರ್ಟ್ ಮೊರೆಹೋಗುತ್ತಾ? ಮುಂದೆ ಓದಿ..
ಮಧುಕುಮಾರಿ ಪತಿ
ಮಾರೇನಹಳ್ಳಿ ವಾರ್ಡಿನ ಮಧುಕುಮಾರಿ ಪತಿ ವಾಗೇಶ್ ಮಾತನಾಡುತ್ತಾ, ನಮ್ಮ ವಾರ್ಡಿಗೆ ಸಂಬಂಧಿಸಿದಂತೆ ಟ್ರಾನ್ಸ್ ಫಾರ್ಮರ್ ಬದಲಾಯಿಸುವ ಬಗ್ಗೆ ಜನರು ಒತ್ತಡ ಹೇರುತ್ತಲ್ಲೇ ಇದ್ದರು. ಈ ಸಂಬಂಧ ಸಚಿವರನ್ನು ಭೇಟಿ ಮಾಡಲು ಹೋಗಿದ್ದೆ.
ಇದರಲ್ಲಿ ರಾಜಕೀಯ ಬೇಡ
ನಾವು ಜನಪ್ರತಿನಿಧಿಗಳು, ಈ ಹಿಂದೆ ಕೂಡಾ ನಾನು ಕಾರ್ಪೋರೇಟರ್ ಆಗಿದ್ದೆ. ಡಿ ಕೆ ಶಿವಕುಮಾರ್ ಅವರು ಸಚಿವರು ಎನ್ನುವ ಕಾರಣಕ್ಕೆ ಮಾತ್ರ ಹೋಗಿದ್ದೆ. ನಾವು ಕೆಲವೇ ಕೆಲವು ನಿಮಿಷ ಮಾತ್ರ ಮಾತುಕತೆ ನಡೆಸಿದ್ದು. ಇದರಲ್ಲಿ ರಾಜಕೀಯ ಇಲ್ಲ ಎಂದು ವಾಗೀಶ್, ಸಮಜಾಯಿಷಿ ನೀಡಿದ್ದಾರೆ.
ಮೇಯರ್ ಚುನಾವಣೆಯ ಸಮಯದಲ್ಲಿ ಯಾಕೀ ಗೊಂದಲ?
ಚುನಾಯಿತ ಪ್ರತಿನಿಧಿಗಳು ಇನ್ನೂ ಪ್ರಮಾಣವಚನ ಸ್ವೀಕರಿಸ ಬೇಕಷ್ಟೇ ಎನ್ನುವುದು ಒಂದೆಡೆಯಾದರೆ, ಮೇಯರ್ ಚುನಾವಣೆಯ ಈ ಸಮಯದಲ್ಲೇ ವಾರ್ಡಿನ ಅಭಿವೃದ್ದಿ ಕೆಲಸಕ್ಕೆಂದು ಬಿಜೆಪಿ ಕಾರ್ಪೋರೇಟರುಗಳು ಯಾಕೆ ಡಿಕೆಶಿಯವರನ್ನು ಭೇಟಿ ಮಾಡಬೇಕಿತ್ತು ಎನ್ನುವುದು.
ಬಿಜೆಪಿ ಸದಸ್ಯರು ಕೂಡಾ ರೆಸಾರ್ಟಿಗೆ
ಜೆಡಿಎಸ್, ಕಾಂಗ್ರೆಸ್ ಮತ್ತು ಪಕ್ಷೇತರರಂತೆ ಬಿಜೆಪಿ ಕೂಡಾ ರೆಸಾರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಆದರೆ ಬುಧವಾರ (ಸೆ 9) ಹೈಕೋರ್ಟಿನ ತೀರ್ಪಿನ ನಂತರ ಬಿಜೆಪಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಬುಧವಾರ ಹೈಕೋರ್ಟ್ ತೀರ್ಪು
ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರು, ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿಕೊಳ್ಳುವ ಸಾಧ್ಯತೆಯಿದೆ.