ಅಧಿಕಾರಿ ಕಿರಿಕಿರಿ ತಾಳದೆ ಕೆಎಸ್ಆರ್ಟಿಸಿ ಚಾಲಕ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 24 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಹಿರಿಯ ಅಧಿಕಾರಿಯ ಕಿರುಕುಳ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಕೆಎಸ್ಆರ್ಟಿಸಿ ಚಾಲಕ ವಿನಾಯಕರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶಾರಣಾಗಿದ್ದಾರೆ. ಹೆಬ್ಬಾಳ ಬಳಿಯ ದಾಸರಹಳ್ಳಿಯ ತಮ್ಮ ಮನೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ, ಮನೆಯಲ್ಲಿ ಎಲ್ಲರೂ ಇರುವ ಸಮಯ, ಊಟ ಮಾಡಿದ ನಂತರ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ಕೆಜಿಎಫ್ನ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ್ಗೆ ಎರಡು ವರ್ಷದ ಹಿಂದೆ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಶಾಂತಿನಗರದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕೆಲಸ ಮಾಡಿಕೊಂಡಿದ್ದ ವಿನಾಯಕ್ಗೆ ಅಲ್ಲಿನ ಹಿರಿಯ ಅಧಿಕಾರಿ ಕೆಲಸದ ನಿಮಿತ್ತ ದಿನಾಲು ಕಿರುಕುಳ ನೀಡುತ್ತಿದ್ದರೆಂದು ಮನೆಯವರು ಆರೋಪಿಸಿದ್ದಾರೆ.
ಈ ಕಾರಣದಿಂದಾಗಿ ಕಳೆದ 10 ದಿನದಿಂದ ಕೆಲಸಕ್ಕೆ ಗೈರು ಹಾಜರು ಆಗಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಮರಣಪತ್ರದಲ್ಲಿ ಆ ಹಿರಿಯ ಅಧಿಕಾರಿಯ ಹೆಸರು ಬರೆದಿಟ್ಟು ಕೋಣೆಗೆ ಮಲಗಲು ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿನಾಯಕ್ನ ಮನೆಯವರು ಹಾಗು ಪೋಷಕರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.
ವಿನಾಯಕ್ಗೆ ಮೂರು ವರ್ಷದ ಹಿಂದೆಷ್ಟೇ ಮದುವೆಯಾಗಿದ್ದ. ದಂಪತಿಗಳಿಗೆ ಒಂದು ಮಗು ಇದೆ. ವಿನಾಯಕ್ ಹೆಂಡತಿ ಇನ್ನೊಂದು ಮಗುವಿಗೆ ಗರ್ಭಿಣಿಯಾಗಿದ್ದಾರೆ. ಇಂತಹ ಸಮಯದಲ್ಲಿ ಶಾಂತಿನಗರದ ಕೆಎಸ್ಆರ್ಟಿಸಿ ಬಸ್ ಡಿಪೋ ಹಿರಿಯ ಅಧಿಕಾರಿಗಳೆ ತನ್ನ ಮಗನ ಸಾವಿಗೆ ಕಾರಣ ಎಂದು ವಿನಾಯಕ್ನ ಪೋಷಕರು ಆರೋಪಿಸಿದ್ದಾರೆ.
ಈ ಘಟನೆಯ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ದೂರಿನನ್ವಯ ತನಿಖೆಯನ್ನ ಮುಂದುವರೆಸಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ತಿಳಿಸಿದ್ದಾರೆ.