ಬೆಂಗಳೂರು ಟ್ರಾಫಿಕ್ ಅಂದರೆ ರೇಜಿಗೆ, ಆದರೂ ಸ್ವಂತ ಕಾರು ಬೇಕಂತೆ
ಬೆಂಗಳೂರು, ಆಗಸ್ಟ್ 24: ಬೆಂಗಳೂರು ಟ್ರಾಫಿಕ್ ನಿಂದ ರೋಸಿ ಹೋಗಿರುವ, ಈ ಊರಿನ ಸಂಚಾರ ದಟ್ಟಣೆ ಬಗ್ಗೆ ಕಾಳಜಿ ತೋರಿಸುವ, ಅವಕಾಶ ಸಿಕ್ಕಾಗಲೆಲ್ಲ ಈ ಬಗ್ಗೆ ಗಮನ ಸೆಳೆಯುವ ಯುವ-ವಿದ್ಯಾವಂತ ಸಮೂಹದ ಗುರಿ ಏನು ಗೊತ್ತಾ? ಸ್ವಂತಕ್ಕೊಂದು ಕಾರು ಖರೀದಿಸೋದು.
ಎಂ.ಎಸ್.ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಐಐಎಸ್ ಸಿ ಸೇರಿ ಅಧ್ಯಯನವೊಂದನ್ನು ಕೈಗೊಂಡಿತ್ತು. ಅದರಿಂದ ಗೊತ್ತಾದ ಮಾಹಿತಿಗಳಿವು. ಸರಾಸರಿ 22 ವರ್ಷ ವಯಸ್ಸಿನ, ಕನಿಷ್ಠ ಆರು ತಿಂಗಳು ಕೆಲಸಕ್ಕೆ ಹೋಗಿರುವ ಅನುಭವ ಇರುವವರನ್ನು ಈ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.[ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಮೂಲ ಯಾರು ?]
ಕಾರು ಇದ್ದರೆ ಸಮಾಜದಲ್ಲಿ ಆರ್ಥಿಕ ಸ್ಥಾನಮಾನ ಹೆಚ್ಚಾಗುತ್ತದೆ ಎಂದು ಶೇ 80ರಷ್ಟು ಜನ ಅಭಿಪ್ರಾಯಪಟ್ಟರೆ, ಕಾರಿದ್ದರೆ ಹೆಚ್ಚಿನ ಮರ್ಯಾದೆ ಸಿಗತ್ತೆ ಅಂತ ಶೇ 40ರಷ್ಟು ಜನ ಹೇಳಿದ್ದಾರೆ. ಶೇ 60ರಷ್ಟು ಯುವಕರಿಗೆ ಕಾಲೇಜಿನಲ್ಲಿ ಕಾರಿಗೆ ಹೋಗುವುದು ಖುಷಿ ವಿಚಾರ.
ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಆಶಿಷ್ ಅವರ ಪ್ರಕಾರ, ಈ ನಡವಳಿಕೆ ಬದಲಾಗಬೇಕು ಅಂದರೆ ಯೋಜನೆಗಳು ಹಾಗೂ ಮೂಲಸೌಕರ್ಯದಲ್ಲಿನ ಬದಲಾವಣೆಗಳು ಜತೆಜತೆಗೆ ಸಾಗಬೇಕು. ಸರ್ಕಾರವು ಪಾರ್ಕಿಂಗ್ ಫೀ ಹೆಚ್ಚಿಸಬೇಕು, ಬಸ್ ಗಳ ಸಂಚಾರಕ್ಕೆ ಪ್ರತ್ಯೇಕವಾಗಿ ಪ್ರಾಶಸ್ತ್ಯ ನೀಡುವಂಥ ಲೇನ್ ಗಳನ್ನು ಮಾಡಬೇಕು. ಆಗ ಜನರು ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಾರೆ.[ರಸ್ತೆ ನಿಯಮ ಉಲ್ಲಂಘಿಸಿದವನ ಫೋಟೋ ತೆಗೆದಿದ್ದು ತಪ್ಪಾ?]
ಮಾಧ್ಯಮಗಳಲ್ಲಿ ಅಂದ-ಚೆಂದವಾಗಿ ತೋರಿಸುವ ವಾಹನಗಳು ಎರಡು ವರ್ಷಕ್ಕೊಮ್ಮೆ ಕಾರು ಬದಲಿಸುವಂತೆ ಪ್ರೇರೇಪಿಸುತ್ತದೆ. ಒಬ್ಬ ರೈತನಿಗೆ ಟ್ರ್ಯಾಕ್ಟರ್ ಖರೀದಿಗೆ ಸಿಗುವ ಸಾಲಕ್ಕಿಂತ ಸುಲಭವಾಗಿ ಕಾರು ಸಾಲ ಸಿಗುತ್ತದೆ, ಆದ್ದರಿಂದ ಕಾರು ಖರೀದಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಬೆಂಗಳೂರು ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್ ಶ್ರೀನಿವಾಸ ಹೇಳುತ್ತಾರೆ.
ಆಶಿಷ್ ಹೇಳುವಂತೆ ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಗೆ ಉತ್ತಮ ಉದಾಹರಣೆ. ಆದರೆ ಅದು ಎಲ್ಲ ಕಡೆ ತಲುಪುವುದಿಲ್ಲ. ಇನ್ನು ವಿನಯ್ ಅವರಿಗೆ, ಮೆಟ್ರೋ ಸೇವೆ ವಿಸ್ತರಿಸಿದರಷ್ಟೇ ಸಾಲದು. ಏಕೆಂದರೆ ಅದು ಶೇ 10ರಷ್ಟು ಜನರಿಗೆ ಮಾತ್ರ ಸಿಗುವುದಕ್ಕೆ ಸಾಧ್ಯ.[ಸುರಕ್ಷಿತ ಪ್ರಯಾಣ: ದಂಡಂ ದಶಗುಣಂ ಎಂದ ಕೇಂದ್ರ ಸರ್ಕಾರ]
ಈ ಎಲ್ಲ ಸಮಸ್ಯೆಗೂ ಪರಿಹಾರವೆಂದರೆ ಬಸ್ ಸಂಚಾರದಲ್ಲಿ ಬದಲಾವಣೆ ಆಗಬೇಕು. ಸರಿಯಾದ ಬಸ್ ನಿಲ್ದಾಣ, ನಿಯಮಿತವಾದ ಸಂಚಾರ, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬೈಕ್ ಬಾಡಿಗೆ ಕೇಂದ್ರಗಳು ಆದರೆ ಸಾರ್ವಜನಿಕ ಸಾರಿಗೆ ಮೇಲೆ ಜನರಿಗೂ ನಂಬಿಕೆ ಬಂದು, ಇದನ್ನೇ ಬಳಸುತ್ತಾರೆ ಎನ್ನುತ್ತಾರೆ ವಿನಯ್.
ಕಾರ್ ಬೇಕ್...
700 ಜನರ ಪೈಕಿ ಶೇ 62ರಷ್ಟು ಜನ ಶೀಘ್ರದಲ್ಲಿ ಕಾರು ಖರೀದಿಸುವುದಾಗಿ ಹೇಳಿದ್ದಾರೆ. ಅವರ ಕುಟುಂಬಗಳಲ್ಲಿ ಕಾರಿದೆಯೋ ಇಲ್ಲವೋ ಎಂಬ ಅಂಶ ಕೂಡ ಉತ್ತರದ ಮೇಲೆ ಪ್ರಭಾವ ಬೀರಿದೆ.
ಇನ್ನೂ ಹತ್ತು ವರ್ಷ ಬೇಡ
ಶೇ 5ರಷ್ಟು ಮಂದಿ ಮುಂದಿನ 10 ವರ್ಷಗಳ ಕಾಲ ಕಾರು ಖರೀದಿಸುವ ಆಲೋಚನೆ ಇಲ್ಲ ಎಂದಿದ್ದರೆ, ಶೇ 25ರಷ್ಟು ಮುಂದಿನ ಐದು ವರ್ಷ ಕಾರು ಖರೀದಿಸುವುದಿಲ್ಲ ಎಂದಿದ್ದಾರೆ.
ಬೈಕೇ ಇಲ್ಲ...
ದ್ವಿಚಕ್ರ ವಾಹನ ಕೂಡ ಇಲ್ಲದ ಶೇ 74ರಷ್ಟು ಮಂದಿಗಿಂತ ದ್ವಿಚಕ್ರ ವಾಹನ ಇರುವ ಶೇ 77ರಷ್ಟು ಮಂದಿ ಮುಂದಿನ 5 ವರ್ಷದಲ್ಲಿ ಸ್ವಂತಕ್ಕೆ ಕಾರು ತೆಗೆದುಕೊಳ್ಳಬೇಕು ಎಂದಿದ್ದಾರೆ.
ಪೋಸ್ಟ್ ಗ್ರಾಜುಯೇಟ್ಸ್
ವಿದ್ಯಾರ್ಹತೆ ಕೂಡ ಈ ನಿರ್ಧಾರದಲ್ಲಿ ಪಾತ್ರ ವಹಿಸಿದೆ. ಶೇ 71ರಷ್ಟು ಜನ ಯಾರದು ಸ್ನಾತಕೋತ್ತರ (ಪೋಸ್ಟ್ ಗ್ರಾಜುಯೇಷನ್) ಪದವಿ ಆಗಿದೆಯೋ ಅವರು ಆದಷ್ಟು ಬೇಗ ಕಾರು ಖರೀದಿಸಬೇಕು ಎಂದಿದ್ದಾರೆ.
ಯುವ ಜನರ ಆಶಯ, ಗುರಿ
23ರಿಂದ 29 ವರ್ಷದ ಮಧ್ಯೆ ಇರುವ ಶೇ 23 ಮಂದಿ ಬೆಂಗಳೂರಿಗರು ಮುಂದಿನ ಐದರಿಂದ ಹತ್ತು ವರ್ಷದಲ್ಲಿ ಕಾರು ಖರೀದಿಸುವ ಆಲೋಚನೆಯಲ್ಲಿದ್ದಾರೆ. ಶೇ 40ರಷ್ಟು ಜನರ ಪ್ರಕಾರ ಭಾರತದಲ್ಲಿ ಕಾರು ಅಗತ್ಯ.
ಸುಸ್ತಾಗತ್ತಪ್ಪ..
ಸಾರ್ವಜನಿಕ ಸಾರಿಗೆಯಲ್ಲಿ ಹೋದರೆ ಸುಸ್ತಾಗುತ್ತದೆ, ತುಂಬ ಸಮಯ ಹಿಡಿಯುತ್ತದೆ. ಬಸ್ ರೂಟ್, ಅದರ ಸ್ಟಾಪ್ ಗಳು ಸರಿಯಾಗಿಲ್ಲ. ಅಲ್ಲಿನ ಸಮಸ್ಯೆಗೆ ಹೋಲಿಸಿದರೆ ಕಾರಿನಲ್ಲಿ ಹೋಗುವಾಗ ಟ್ರಾಫಿಕ್ ಸಮಸ್ಯೆ ಏನೇನೂ ಅಲ್ಲ ಎಂದಿದ್ದಾರೆ.
ಹೊಗೆ ಹೊಗೆ
ಕಾರಿನ ಸಂಚಾರ ಹೆಚ್ಚಿರುವುದು ಅನಾರೋಗ್ಯಕರ ಆರ್ಥಿಕತೆಯನ್ನು ಸೂಚಿಸುತ್ತದೆ ಎಂದು ಹತ್ತಿರಹತ್ತಿರ ಶೇ 50ರಷ್ಟು ಮಂದಿ ಹೇಳಿದ್ದರೆ, ವಾಹನದ ಹೊಗೆಯೇ ಭಾರತದ ಪರಿಸರ ಮಾಲಿನ್ಯಕ್ಕೆ ಕಾರಣ ಎಂದು ಶೇ 80ರಷ್ಟು ಮಂದಿ ಹೇಳಿದ್ದಾರೆ.
ರಸ್ತೆಯೇ ಸರಿಯಾಗಿಲ್ಲ..
ಸದ್ಯಕ್ಕಿರುವ ದೇಶದ ರಸ್ತೆ ಮಾರ್ಗವು ವಾಹನ ಸಂಚಾರ ಸಮಸ್ಯೆಯನ್ನು ನಿವಾರಿಸುವಷ್ಟು ಶಕ್ತವಾಗಿಲ್ಲ ಎಂದು ಶೇ 79ರಷ್ಟು ಮಂದಿಗೆ ಗೊತ್ತಿದೆ. ಆದರೆ ಇವು ಯಾವುದರಿಂದಲೂ ಕಾರು ಖರೀದಿಸುವ ನಿರ್ಧಾರ ಬದಲಿಸಲು ಸಿದ್ಧರಿಲ್ಲ.