ಬರ ಪರಿಹಾರ ಏನೂ ನೀಡಿಲ್ಲ : ಎಚ್ಡಿ ಕುಮಾರಸ್ವಾಮಿ ಕಿಡಿ
ರಾಜ್ಯ ಬರಗಾಲದಲ್ಲಿ ತತ್ತರಿಸುತ್ತಿರುವಾಗ, ಬರಗಾಲದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ನೀರಸ ಬಜೆಟ್ ಮಂಡಿಸಿರುವುದು ಖೇದಕರ ಎಂದು ಮಾಜಿ ಮುಖ್ಯಮಂತ್ರಿ, ಜೆಡಿ ಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 15: ರಾಜ್ಯ ಬರಗಾಲದಲ್ಲಿ ತತ್ತರಿಸುತ್ತಿರುವಾಗ, ಬರಗಾಲದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ನೀರಸ ಬಜೆಟ್ ಮಂಡಿಸಿರುವುದು ಖೇದಕರ ಎಂದು ಮಾಜಿ ಮುಖ್ಯಮಂತ್ರಿ, ಜೆಡಿ ಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. [21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]
ಬಜೆಟ್ ಕುರಿತು ಅವರ ಪ್ರತಿಕ್ರಿಯೆಯನ್ನು ಕೇಳಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ತೀವ್ರ ಬರದಿಂದ ರಾಜ್ಯದ ಜನತೆ ಕಂಗೆಟ್ಟಿರುವಾಗ ಜನರ ನಿರೀಕ್ಷೆಯನ್ನು ಹುಸಿಗೊಳಿಸುವಂಥ ಬಜೆಟ್ ಅನ್ನು ಸಿದ್ದರಾಮಯ್ಯ ಸರ್ಕಾರ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿಲ್ಲ, ಸಾಲಮನ್ನಾ ಎಲ್ಲರ ಬೇಡಿಕೆಯಾಗಿತ್ತು. ಆದರೆ ಅದನ್ನೂ ಬಜೆಟ್ ಹುಸಿಗೊಳಿಸಿದೆ ಎಂದು ದೂರಿದ್ದಾರೆ. [LIVE: ಮಂತ್ರಿ ಪರಿಷತ್ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ]
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಸಣ್ಣ ಪುಟ್ಟ ಸಮಾಜದ, ಜಾತಿಯ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಅವರನ್ನು ಶೈಕ್ಷಣಿಕವಾಗಿ ಮುಂದೆ ತರುವಂಥ ಯೋಜನೆಗಳನ್ನು ಘೋಷಿಸಿಲ್ಲ. ಒಟ್ಟಿನಲ್ಲಿ ಇದು ನಿಜಕ್ಕೂ ನೀರಸವಾದ ಮತ್ತು ಅಭಿವೃದ್ಧಿಪರವಲ್ಲದ ಬಜೆಟ್ ಎಂದವರು ಅಭಿಪ್ರಾಯಪಟ್ಟಿದ್ದಾರೆ.