ಯಡಿಯೂರಪ್ಪ ಖುಲಾಸೆ: ಚಾರ್ಜ್ ಶೀಟ್ ನಲ್ಲಿ ಏನಿತ್ತು?
ಬೆಂಗಳೂರು, ಅಕ್ಟೋಬರ್, 26: ಅಕ್ರಮ ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ (ಅ.26) ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ 40ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಯಡಿಯೂರಪ್ಪ ಅವರ ಮೇಲಿತ್ತು.
ಇನ್ನು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿ ಗುರುತಿಸಿದ್ದ, ಬಿಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ರಾಘವೇಂದ್ರ, ವಿಜಯೇಂದ್ರ, ಮತ್ತು ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರನ್ನೂ ಸೇರಿದಂತೆ ಒಟ್ಟು 13ಮಂದಿ ಆರೋಪಿಗಳನ್ನೂ ಸಹ ಕೋರ್ಟ್ ಖುಲಾಸೆಗೊಳಿಸಿದೆ.
ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ತೀರ್ಪು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸುವ ಸಾದ್ಯತೆ ಇದೆ ಎನ್ನಲಾಗಿದೆ.
ಕೋರ್ಟ್ ಆವರಣಕ್ಕೆ ಪ್ರವೇಶಿಸುವ ಮುನ್ನ ಬಿ.ಎಸ್.ಯಡಿಯೂರಪ್ಪ ಅವರು ನಾನು ಗೆಲ್ಲುವ ವಿಶ್ವಾಸವಿದೆ. ಕಾರ್ಯಕರ್ತರ ಬೆಂಬಲ ನಮಗಿದೆ. ಎಂದು ಹೇಳಿ ಕೋರ್ಟ್ ಆವರಣ ಪ್ರವೇಶಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಲಂಚಪಡೆದಿದ್ದರು ಎಂದು ಆರೋಪಿಸಿ ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು.
ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಇಬ್ಬರು ಪುತ್ರರು ಮತ್ತು ಅಳಿಯ ಹಾಗು ಜೆ.ಎಸ್.ಡಬ್ಲ್ಯೂ ಸ್ಟೀಲ್ ಕಂಪೆನಿ ಮತ್ತು ತನ್ನ ಅಧೀನ ಬಳ್ಳಾರಿ ಮೂಲದ 4 ಕಂಪೆನಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿತ್ತು.
ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ವಿಜೇಂದ್ರ ಮತ್ತು ಅವರ ಅಳಿಯ ಸೋಹನ್ ಕುಮಾರ್ ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ 20ಕೋಟಿ ರೂ. ಮೊತ್ತದ ಅಕ್ರಮ ಹಣ ಜೆ.ಎಸ್.ಡಬ್ಲ್ಯೂ ಸ್ಟೀಲ್ ಕಂಪೆನಿಯಿಂದ ಜಮಾವಣೆಯಾಗಿದೆ ಎಂದು 2012 ಅಕ್ಟೋಬರ್ 16ರಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು.
2010ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಈ ಹಣ ಜಮಾವಣೆಯಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿತ್ತು. ಮತ್ತು ಈ ಹಣವನ್ನು ಯಡಿಯೂರಪ್ಪ ಅವರ ಪುತ್ರರು ನಡೆಸುತ್ತಿರುವ ಪ್ರೇರಣಾ ಎಜುಕೇಶನ್ ಟ್ರಸ್ಟ್ ಗೆ ನೀಡಲಾಗಿದೆ ಎಂದು ಕೂಡ ಸಿಬಿಐ ಉಲ್ಲೇಖಿಸಿತ್ತು.
ಇದಷ್ಟೇ ಅಲ್ಲದೇ ಗಣಿಗಾರಿಕೆ ಗುತ್ತಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಕೆಲವು ಕಡತಗಳಿಗೆ ಸಹಿ ಹಾಕಿದ್ದರು. ಈ ಮೂಲಕ ಜೆ ಎಸ್.ಡಬ್ಲ್ಯೂ ಸ್ಟೀಲ್ ಕಂಪೆನಿಯಿಂದ ಕೋಟ್ಯಂತರ ರೂ.ಹಣ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು.
ಜತೆಗೆ ಜೆ.ಎಸ್. ಡಬ್ಲೂ ಸ್ಟೀಲ್ ಕಂಪೆನಿಗೆ ಬೆಂಗಳೂರು ಬಳಿಯ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನೋಟಿಫೈ ಮಾಡಿ ಕೊಟ್ಟಿದ್ದಾರೆ. ಇದಕ್ಕಾಗಿ ಕಂಪೆನಿಯಿಂದ 20 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಸಿಬಿಐ ಉಲ್ಲೇಖಿಸಿತ್ತು.
ಮುಖ್ಯಮಂತ್ರಿಯಂತಹ ಉನ್ನತ ಸ್ಥಾನದಲ್ಲಿದ್ದ ಯಡಿಯೂರಪ್ಪನವರು ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.