ಲಾಲ್ ಬಾಗ್ ಫ್ಲವರ್ ಶೋ; 'ಒನ್ ಇಂಡಿಯಾ' ಕಂಡಂತೆ.....
ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಸಾವಿರಾರು ಜನರು ಸಸ್ಯಕಾಶಿಯತ್ತ ದಾಂಗುಡಿಯಿಡುತ್ತಿದ್ದಾರೆ.
ಬೆಂಗಳೂರು, ಜನವರಿ 23: ಬೆಂಗಕಾಳೂರಿಗೆ ಉದ್ಯಾನ ನಗರಿ ಎಂದು ಬಿರುದನ್ನು ತಂದುಕೊಟ್ಟದ್ದರಿಂದ ಲಾಲ್ ಬಾಗ್ ನ ಪಾತ್ರ ಮಹತ್ವದ್ದಾದುದು. ಶತಶತಮಾನಗಳು ಕಳೆದರೂ ಈ ಬೃಹತ್ ಉದ್ಯಾನ ತನ್ನದೇ ಆದ ಸೌಂದರ್ಯ ಹಾಗೂ ಪ್ರತಿಷ್ಠೆಯನ್ನು ಕಾಪಿಡುತ್ತಾ ಬಂದಿದೆ.
ಸದ್ಯಕ್ಕೆ ಈ ಪುಷ್ಪೋದ್ಯಾನದಲ್ಲಿ ಕಿಕ್ಕಿರಿದ ಜನಜಾತ್ರೆ. ಅದಕ್ಕೆ ಕಾರಣ, ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಲಾಲ್ ಬಾಗ್ ಪುಷ್ಪ ಪ್ರದರ್ಶನ ಈ ಬಾರಿಯೂ ಇಲ್ಲಿ ಆಯೋಜನೆಗೊಂಡಿರುವುದು.
ಹೂವುಗಳಿಂದಲೇ ನಿರ್ಮಿಸಲಾಗಿರುವ ಬಿಜಾಪುರದ ಗೋಳ ಗುಮ್ಮಟದ ಪ್ರತಿಕೃತಿ ಈ ಬಾರಿಯ ಪುಷ್ಪ ಪ್ರದರ್ಶನದ ವಿಶೇಷ. ಸಾವಿರಾರು ಜನರು ಬಂದು ನೋಡಿ ಕಣ್ಮುಬಿಕೊಳ್ಳುತ್ತಿರುವ ಈ ಪ್ರದರ್ಶನದ ಕೆಲವಾರು ಸ್ಮರಣೀಯ ವಿಚಾರ, ಫೋಟೋಗಳು ಇಲ್ಲಿ ನಿಮಗಾಗಿ.
ಹಿರಿಯರಿಗೆ ನಮಸ್ಕರಿಸಿ ಮುಂದಕ್ಕೆ
ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದು ಲಾಲ್ ಭಾಗ್ ಒಳಹೊಕ್ಕಾಗ ಮಧ್ಯಾಹ್ನ ಸರಿಯಾಗಿ 3:30 ಗಂಟೆ. ಒಳಹೊಕ್ಕ ಕೂಡಲೇ ಕ್ಯಾಮೆರಾ ಹೆಗಲೇರಿಸಿಕೊಂಡು ನಡೆಯುವ ನಮ್ಮನ್ನು ಮೊದಲು ಸ್ವಾಗತಿಸುವವರೇ ತೋಟಗಾರಿಕೆ ಇಲಾಖೆಯ ಮಾಜಿ ನಿರ್ದೇಶಕ ಹಾಗೂ ಭಾರತೀಯ ತೋಟಗಾರಿಕಾ ಪಿತಾಮಹರೆಂದು ಬಿರುದು ಪಡೆದಿರುವ ದಿ. ಎಂ.ಎಚ್. ಮರಿಗೌಡರ ಪುತ್ಥಳಿ.
ಲಾಲ್ ಭಾಗ್ ಗೆ ವಿಶ್ವವಿಖ್ಯಾತಿ
ಇಂದು ಲಾಲ್ ಬಾಗ್ ವಿಶ್ವವಿಖ್ಯಾತಿ ಪಡೆದಿದೆ, ಅದಕ್ಕಿಂತಲೂ ಹೆಚ್ಚಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದಾದರೆ ಅದಕ್ಕೆ ಕಾರಣ ಮರಿಗೌಡರೇ. ಇಲ್ಲಿನ ತೋಟಗಾರಿಕೆಯಲ್ಲಿ ಅವರು ಮಾಡಿದ ಕ್ರಾಂತಿ ದೇಶದೆಲ್ಲೆಡೆ ಹೆಸರುವಾಗಿಯಾಗಿ ಅನೇಕ ರಾಜ್ಯಗಳು ಕರ್ನಾಟಕವನ್ನು ಅನುಕರಣೆ ಮಾಡಿದವು. ಹಾಗಾಗಿಯೇ ಮರಿಗೌಡರಿಗೆ ಭಾರತೀಯ ತೋಟಗಾರಿಕಾ ಪಿತಾಮಹ ಎಂಬ ಬಿರುದು ಸಿಕ್ಕಿದೆ. ಹಾಗಾಗಿ, ಈ ಬಾರಿಯ ಲಾಲ್ ಭಾಗ್ ನಲ್ಲಿ ಅವರಿಗೆ ಹೆಜ್ಜೆ ಹೆಜ್ಜೆಗೂ ನಮನ ಸಲ್ಲಿಸಲಾಗಿದೆ.
ಜನ ಮರುಳೋ ಜಾತ್ರೆ ಮರುಳೋ
ಬೆಳಗ್ಗೆ ಕೊಂಚ ಜನಸಂದಣಿ ಕಡಿಮೆ ಇರುತ್ತದೆ ಸುಮಾರು 11 ಗಂಟೆಯ ನಂತರ ಇಲ್ಲಿ ಜನಸಾಗರವೇ ಹರಿದುಬರುತ್ತದೆ ಎಂಬುದು ಲಾಲ್ ಬಾಗ್ ನ ಕಾವಲುಗಾರನೊಬ್ಬನ ಮಾತು. ಹಾಗಾಗಿ ಸಂಜೆ ವೇಳೆಗೆ, ಸುಮಾರು ಜನ ಅಲ್ಲಿ ಜಮಾಯಿಸಿದ್ದರು. ಆ ಹೊತ್ತಿಗೆ ಬಿಸಿಲು ಝಳ ಕೊಂಚ ಜೋರಿತ್ತಾದರೂ, ಒಂದರ್ಧ ಗಂಟೆಯಲ್ಲಿ ಮೋಡ ಕವಿದಂತಾಗಿ ತಣ್ಣಗಾಗುತ್ತಾ ಬಂತು.
ಗೋಳಗುಮ್ಮಟ ನೋಡಲು ಗಡಿಬಿಡಿ
ಅಂದಹಾಗೆ, ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುವ ಹೂವುಗಳಿಂದ ನಿರ್ಮಿತವಾದ ಬಿಜಾಪುರದ ಗೋಳಗುಮ್ಮಟ. ಪ್ರತಿಬಾರಿಯೂ ಇಂಥ ಅನೇಕಾನೇಕ ವೈಶಿಷ್ಟ್ಯಗಳು ಇದ್ದೇ ಇರುತ್ತವೆ. ಈ ಬಾರಿ ಗೋಳಗುಮ್ಮಟದ್ದೇ ಹೈಲೈಟ್. ಆದರೆ, ಈ ಹಿಂದಿನ ಕೆಲ ಫಲಪುಷ್ಪ ಪ್ರದರ್ಶನಗಳಲ್ಲಿ ಎರಡೆರಡು ಕಲಾಕೃತಿಗಳಿರುತ್ತಿದ್ದವು. ಆದರೆ, ಈ ಬಾರಿ ಮಾತ್ರ ಗೋಳಗುಮ್ಮಟವೊಂದೇ ಪ್ರೇಕ್ಷಕರನ್ನು ಸೆಳೆಯಲು ತಲೆಯೆತ್ತಿ ನಿಂತಿದೆ.
ಸೆಲ್ಫಿಗಳಿಗೆ ಲೆಕ್ಕವಿಲ್ಲ
ಎಲ್ಲೆಲ್ಲೂ ಸೆಲ್ಫಿಗಳ ಭರಾಟೆ. ಹೌದು. ಎಲ್ಲರ ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇವೆಯಲ್ಲಾ. ಫೋಟೋಗಳು ತೆಗೆದಿದ್ದೇ ತಗೆದಿದ್ದು, ತಗೆದಿದ್ದೇ ತಗೆದಿದ್ದು. ಯಾವುದಕ್ಕೂ ಲೆಕ್ಕವಿಲ್ಲ, ಜಮೆಯಿಲ್ಲ. ಆದರೆ, ಗೋಲ್ ಗುಂಬಜ್ ಕಡೆಯಲ್ಲೇ ಸೆಲ್ಫಿ ತಗೆಯುತ್ತಾ ಮೈಮರೆತು ನಿಂತ ಜನಸಾಗರವನ್ನು ಮುಂದಕ್ಕೆ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಗಿದ್ದು ಮಾತ್ರ ಸುಳ್ಳಲ್ಲ!
ಕಲಾಸಕ್ತರ ಜನಜಂಗುಳಿ
ಇರುವೆಗಳಂತೆ ಸಾಲುಗಟ್ಟಿ ಬರುತ್ತಲೇ ಇದ್ದ ಜನ ಜಂಗುಳಿಯಿಂದ ಲಾಲ್ ಬಾಗ್ ಅಂತೂ ಅಕ್ಷರಶಃ ತುಂಬಿ ಹೋಗಿತ್ತು. ಅಲ್ಲೆಷ್ಟು ಸಸ್ಯ ಪ್ರಬೇಧಗಳಿವೆಯೋ ಅಷ್ಟೇ ಸಂಖ್ಯೆಯಲ್ಲಿ ಜನರೂ ಸೇರಿದ್ದರೆಂದರೆ ಅದು ಅತಿಶಯೋಕ್ತಿಯಾಗಲಾರದು. ಹಾಗಾಗಿ, ಸಸ್ಯ ಕಾಶಿಯಂತೂ ಜನರ ಹಿಂಡಿನಿಂದಾಗಿ ಮತ್ತಷ್ಟು ಕಳೆಗಟ್ಟಿತ್ತು.
ಮಧುರ ಗಾನ ಮೊಳಗಿತ್ತಾ...
ಹಾಗೆ ಲಾಲ್ ಬಾಗನ ಪ್ರತಿಯೊಂದು ಭಾಗವನ್ನೂ ಸುತ್ತಾಡಿ, ಸುಸ್ತಾಗುವ ಹೊತ್ತಿಗೆ ಸಂಜೆಯಾಗಿತ್ತು. ಪಡುವಣದಲ್ಲಿ ಸೂರ್ಯನು ಮುಳುಗುತ್ತಿದ್ದಂತೆ ಅಲ್ಲಿ ಧ್ವನಿವರ್ಧಕಗಳ ಮೂಲಕ ವೀಕ್ಷಕರಿಗೆ ಸೂಚನೆ ನೀಡುತ್ತಿದ್ದ ಪ್ರಚಾರಕರು ಬೇಗನೇ ಲಾಲ್ ಬಾಗ್ ನಿಂದ ಹೊರಡುವಂತೆ ಸೂಚನೆ ನೀಡಲಾರಂಭಿಸಿದರು. ಅಷ್ಟರಲ್ಲಿ ಗಾಜಿನ ಮನೆಗೆ ಹತ್ತಿರದಲ್ಲೇ ಇರುವ, ವಾದ್ಯವೃಂದ ಮಂಟದಲ್ಲಿ ಸಂಜೆಯ ಮಧುರ ಗೀತೆಗಳ ಗೀತಗಾಯನ ಆರಂಭವಾಗಿತ್ತು. ಅದನ್ನು ಸವಿಯುವ ಹೊತ್ತಿಗೆ ಕತ್ತಲಾವರಿಸಿತ್ತು. ಲಾಲ್ ಬಾಗ್ ಗೊಂದು ನಮಸ್ಕಾರ ಹಾಕಿ ಮನೆ ಕಡೆಗೆ ಹೆಜ್ಜೆ ಹಾಕಿದ್ದಾಯ್ತು.