ಬದ್ಧತೆಯಿಲ್ಲದ ರಾಜ್ಯಪಾಲರ ಭಾಷಣ; ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು, ಫೆಬ್ರವರಿ, 6: ರಾಜ್ಯ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ವಜುಬಾಯಿ,ಆರ್.ವಾಲ ಜಂಟಿ ಅಧಿವೇಶದಲ್ಲಿ ಮಾಡಿದ ಭಾಷಣ ಅತ್ಯಂತ ಕಳಪೆ ಹಾಗೂ ದೂರದೃಷ್ಟಿಯಿಲ್ಲ ಭಾಷಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರ ಭಾಷನ ದೂರದೃಷ್ಟಿ ಇಲ್ಲದ, ಭದ್ಧತೆ ಕೊರತೆ ಹೊಂದಿರುವ ಭಾಷಣವಾಗಿದೆ. ಇದರಲ್ಲಿ ಹೊಸ ಕಾರ್ಯಕ್ರಮವೇನೂ ಕಾಣುತ್ತಿಲ್ಲ. ಮೂರು ವರ್ಷಗಳ ಕಾಲ ಸಮಯವ್ಯಯಿಸಿದ್ದು, ಯಾವುದೇ ಕಾರ್ಯಕ್ರಮ ರೂಪಿಸಿಯೇ ಇಲ್ಲ. ರೈತರ ಬಗ್ಗೆಯಾಗಲೀ, ಹೈ-ಕ ಭಾಗದ ವಿಶೇಷ ಅನುದಾನ ಕುರಿತಾಗಲೀ ಪ್ರಸ್ತಾಪಿಸಿಲ್ಲ. ನೀರಾವರಿ ವಿಷಯದಲ್ಲಿ ಸ್ಪಷ್ಟ ನಿಲುವು ಕಂಡುಕೊಂಡಿಲ್ಲ ಎಂದು ಆರೋಪಿಸಿದರು.[2017ರಲ್ಲೇ ಕರ್ನಾಟಕದಲ್ಲಿ ಚುನಾವಣೆ -ಕುಮಾರಸ್ವಾಮಿ ಭವಿಷ್ಯ]
ಮಹದಾಯಿ, ಕಾವೇರಿ ವಿಚಾರವಾಗಿ ಸ್ಪಷ್ಟ ವಿವರಣೆ ನೀಡಿಲ್ಲ. ಹಾಗೆಯೇ ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನಕ್ಕಾಗಿ ನಾಲ್ಕು ಸಾವಿರ ಕೋಟಿ ರು. ಇಟ್ಟಿದೇವೆ ಎಂದು ಹೇಳಿದ್ದಾರೆಯೇ ಹೊರತು ಖರ್ಚಿನ ವಿಷಯ ಪ್ರಸ್ತಾಪಿಸಿಲ್ಲ. ಪಾರದರ್ಶಕ ಆಡಳಿತ ಮಾಡುತ್ತೇವೆ ಎಂದು ಎಸಿಬಿ ರಚನೆ ಮಾಡಿ ಭ್ರಷ್ಟಾಚಾರವನ್ನುಸಂಪೂರ್ಣ ನಿಗ್ರಹ ಮಾಡಿದ್ದಾರೆಂದು ಅಣಕವಾಡಿದರು.
ಸರಕಾರ ಮೂರು ವರ್ಷಗಳ ಕಾಲ ನಿದ್ರಾವಸ್ಥೆಯಲ್ಲಿತ್ತು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ ಎಂದ ಮೇಲೆ ನಾವು ಅವರನ್ನು ಟೀಕಿಸಲು ಏನು ಉಳಿದಿದೆ. ಸಿಎಂ ಇದಕ್ಕಾದರೂ ಎಚ್ಚರಿಕೆಯಿಂದ ಇರಬೇಡವೇ ಎಂದರು.