ಜೈಲಿನೊಳಗೂ ಶಶಿಕಲಾಗೆ ಜೀವಭಯ, 10 ಪೊಲೀಸರಿಂದ ರಕ್ಷಣೆ
ಶಶಿಕಲಾಗೆ ಜೈಲಿನಲ್ಲೂ ಅಸುರಕ್ಷತೆಯ ಭಯ. ಅದಕ್ಕಾಗಿ 10 ಮಹಿಳಾ ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಸೆಲ್ ಸುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬೆಂಗಳೂರು, ಫೆಬ್ರವರಿ 16: ಭೂಗತ ಪಾತಕಿಗಳೆಲ್ಲಾ ಜೀವಕ್ಕೆ ಅಪಾಯವಿದ್ದಾಗ ಜೈಲಿನೊಳಗೆ ಹೋಗುವುದು ರೂಢಿ. ಆದರೆ ಶಶಿಕಲಾಗೆ ಜೈಲಿನಲ್ಲೂ ಅಸುರಕ್ಷತೆಯ ಭಯ. ಅದಕ್ಕಾಗಿ 10 ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಸೆಲ್ ಸುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 10 ಜನ ಮಹಿಳಾ ಕಾನ್ ಸ್ಟೇಬಲ್ ಗಳು ಚಿನ್ನಮ್ಮನ ಜೀವಕ್ಕೆ ಏನೂ ಅಪಾಯವಾಗದಂತೆ ಎಚ್ಚರ ವಹಿಸಿದ್ದಾರೆ.[ನಿಯೋಜಿತ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]
ಈಗಾಗಲೇ ಶಶಿಕಲಾ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಈ ಭದ್ರತೆ ನೀಡಲಾಗಿದೆ. ವರದಿಗಳ ಪ್ರಕಾರ ಜೈಲಿನಲ್ಲಿರುವ ತಮಿಳುನಾಡು ಮೂಲದ ಖೈದಿಗಳು ಜಯಲಲಿತಾ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ಇದಕ್ಕೆ ಶಶಿಕಲಾ ಮೇಲಿರುವ ಆಕ್ರೋಶವೇ ಕಾರಣ ಎನ್ನಲಾಗಿದೆ.
2014ರಲ್ಲಿ ಜಯಲಲಿತಾ ಜೈಲಿಗೆ ಬಂದಾಗಲೂ ಇದೇ ರೀತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೋರ್ಟ್ ಶಿಕ್ಷೆ ನೀಡುವಾಗ ಜಯಲಲಿತಾ ಮುಖ್ಯಮಂತ್ರಿಯಾಗಿದ್ದರಿಂದ ಆಕೆಗೆ ಝಡ್ ಪ್ಲಸ್ ಭದ್ರತೆ ಪಡೆಯುತ್ತಿದ್ದರು. ಆದರೆ ಶಶಿಕಲಾ ಯಾವುದೇ ಹುದ್ದೆಯಲ್ಲಿರಲಿಲ್ಲ. ಶಶಿಕಲಾಗೆ ಇಲ್ಲೀವರೆಗೆ ಖಾಸಗಿ ಬಾಡಿಗಾರ್ಡ್ಗಳು ಮಾತ್ರ ರಕ್ಷಣೆ ನೀಡುತ್ತಾ ಬಂದಿದ್ದರು.[ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!]
ಆದರೆ ಜೈಲಿನೊಳಗೆ ಖಾಸಗಿ ಭದ್ರತಾ ಸಿಬ್ಬಂದಿಗಳಿಗೆ ಅವಕಾಶವಿಲ್ಲ. ಮಾತ್ರವಲ್ಲದೆ ಜೈಲಿನಲ್ಲೇದಾರೂ ಆಕೆಯ ಮೇಲೆ ದಾಳಿಯಾದರೆ ಕರ್ನಾಟಕದ ಜೈಲುಗಳು ಅಸುರಕ್ಷಿತ ಎಂದು ಆಕೆ ತಮಿಳುನಾಡಿಗೆ ವರ್ಗಾವಣೆ ಕೇಳುವ ಸಾಧ್ಯತೆಯೂ ಇದೆ. ಹೀಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮೂಲಗಳ ಪ್ರಕಾರ ಸದ್ಯದಲ್ಲೇ ತನ್ನನ್ನು ತಮಿಳುನಾಡು ಜೈಲಿಗೆ ವರ್ಗಾವಣೆ ಮಾಡುವಂತೆ ಶಶಿಕಲಾ ಅರ್ಜಿ ಸಲ್ಲಿಸಲಿದ್ದಾರೆ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಕರ್ನಾಟಕದಲ್ಲೇ ನಡೆದಿದ್ದರಿಂದ ಆಕೆಯನ್ನು ಇಲ್ಲಿಯ ಜೈಲಿಗೆ ಹಾಕಲಾಗಿತ್ತು. ಜೈಲಿನ ನಿಯಮಾವಳಿಗಳ ಪ್ರಕಾರ ವರ್ಗಾವಣೆ ಕೇಳುವ ಅವಕಾಶ ಆಕೆಗೆ ಇದೆ. ಆದರೆ ಕಾರಣಗಳು ಗಟ್ಟಿಯಾಗಿರಬೇಕು ಅಷ್ಟೆ.