ಬೇಗ ಮದುವೆಯಾಗು ಎಂದ ಅಪ್ಪ, ನೇಣಿಗೆ ಶರಣಾದ ಟೆಕ್ಕಿ
ಬೆಂಗಳೂರು, ಅಕ್ಟೋಬರ್ 04: ಮದುವೆ ವಿಷಯವಾಗಿ ಅಪ್ಪನ ಜತೆ ಕಿತ್ತಾಟ ಮಾಡಿಕೊಂಡಿದ್ದ ಸಾಫ್ಟ್ ವೇರ್ ಇಂಜಿನಿಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಜರಾಜೇಶ್ವರಿ ನಗರದ ನಿವಾಸಿ 33 ವರ್ಷ ವಯಸ್ಸಿನ ಇಂಜಿನಿಯರ್ ಇಂದ್ರ ಅವರು ನೇಣಿಗೆ ಶರಣಾದವರು. ಡಿಆರ್ ಡಿಒ ಅಧಿಕಾರಿಯಾಗಿ ನಿವೃತ್ತರಾಗಿರುವ ಉಮಾಪತಿ ಅವರ ಮಗ ಇಂದ್ರ ಇಬ್ಬರ ನಡುವೆ ಕೆಲ ದಿನಗಳಿಂದ ಮದುವೆ ವಿಷಯವಾಗಿ ಮಾತಿನ ಚಕಮಕಿ ನಡೆದಿತ್ತು.
ತಕ್ಷಣವೆ ಮದುವೆಗೆ ಒಪ್ಪಿಕೊಳ್ಳುವಂತೆ ಪೋಷಕರು ಒತ್ತಾಯಿಸಿದ್ದರು. ಆದರೆ, ನನಗೆ ಇನ್ನೂ 3 ವರ್ಷ ಟೈಮ್ ಕೊಡಿ, ಉದ್ಯೋಗದಲ್ಲಿ ಸ್ಥಿರತೆ ಪಡೆಯುತ್ತೇನೆ. ಆಮೇಲೆ ಲೈಫ್ ನಲ್ಲಿ ಸೆಟ್ಲ್ ಆಗಬಹುದು ಎಂದಿದ್ದಾರೆ. ಆದರೆ, ವಾದ ಮುಂದುವರೆದಿದೆ. ಅಪ್ಪನ ವಾದಕ್ಕೆ ಅಮ್ಮ ಕೂಡಾ ದನಿಗೂಡಿಸಿದ್ದಾರೆ. ಇದರಿಂದ ಬೇಸತ್ತ ಇಂದ್ರ, ನೇಣಿಗೆ ಶರಣಾಗಿದ್ದಾರೆ.
ಸೋಮವಾರದಂದು ಘಟನಾ ಸ್ಥಳಕ್ಕೆ ಬಂದ ರಾಜರಾಜೇಶ್ವರಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಇಂದ್ರ ಅವರ ಮೊಬೈಲ್, ಲ್ಯಾಪ್ ಟಾಪ್ ತಪಾಸಣೆ ನಡೆಸಿದ್ದಾರೆ. ಮನೆಯಲ್ಲಿ ಆದ ಜಗಳದಿಂದ ಮನನೊಂದು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.