ಕನ್ನಡ ಮಾತನಾಡದ ಟೆಕ್ಕಿ ಮೇಲೆ ಬೆಂಗಳೂರು ಪೊಲೀಸರ ಹಲ್ಲೆ?
ಬೆಂಗಳೂರು, ಆಗಸ್ಟ್, 18: ತಮಿಳುನಾಡಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕನ್ನಡಿಗನಿಗೆ ದಂಡ ಹಾಕಿದ್ದು ಹಳೆ ಸುದ್ದಿ. ಕನ್ನಡ ಮಾತನಾಡದ ಕಾರಣಕ್ಕೆ ಬೆಂಗಳೂರು ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಹಣವನ್ನು ಕಸಿದುಕೊಂಡಿದ್ದಾರೆ ಎಂಬುದು ಹೊಸ ಆರೋಪ.
ಆಂಧ್ರ ಪ್ರದೇಶ ಮೂಲದ ಟೆಕ್ಕಿ ವೆಂಕಿ ನಲ್ಲಗುಟ್ಲಾ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿ ಡಿಸಿಪಿ ಅಭಿಶೇಖ್ ಘೋಯಲ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಕೆಆರ್ ಪುರಂ ಪೊಲೀಸರು ಸೋಮವಾರ ಆಗಸ್ಟ್ 15 ಸೋಮವಾರ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ನನ್ನ ಚಿನ್ನದ ಸರ ಮತ್ತು ಹಣ ಕಸಿದುಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ವೆಂಕಿ ಮದ್ಯ ಸೇವಿಸಿದ್ದರು. ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
ಆದದ್ದೇನು?
ವೆಂಕಿಯವರ ಸಂಬಂಧಿಕರೊಬ್ಬರು ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದರು. ಆಂಧ್ರ ಪ್ರದೇಶ ನೋಂದಣಿಯ ಕಾರನ್ನು ಕೆಆರ್ ಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಕಾರು ಮಾಲೀಕ ವೆಂಕಿ ರಾತ್ರಿ 9.30ರ ವೇಳೆಗೆ ಸ್ಥಳಕ್ಕೆ ತೆರಳಿ ಘಟನೆ ಬಗ್ಗೆ ಪ್ರಶ್ನೆ ಮಾಡಿದ್ದರು. ಅಸ್ಪಷ್ಟ ಕನ್ನಡದಲ್ಲಿ ವೆಂಕಿ ಪೊಲೀಸರೊಂದಿಗೆ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ನೀವು ಯಾರು? ವಿವರ ಹೇಳಿ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ವೆಂಕಿ ಬೆಂಗಳೂರಿನಲ್ಲಿ ಇದ್ದರೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಬರುವ ಕನ್ನಡ ಮತ್ತು ಇಂಗ್ಲಿಷ್ ಬಳಕೆ ಮಾಡಿ ವೆಂಕಿ ಪೊಲೀಸರೊಂದಿಗೆ ವ್ಯವಹರಿಸಲು ಮುಂದಾಗಿದ್ದಾರೆ. ನಿಮಗೆ ನನ್ನ ಮಾಹಿತಿ ಯಾಕೆ? ಕಾರ್ ಬಗ್ಗೆ ಕೇಳಿ ಎಂದು ವೆಂಕಿ ಹೇಳಿದ್ದಾರೆ.
ಇದಾದ ಮೇಲೆ ಪೊಲೀಸರು ಮತ್ತು ವೆಂಕಿಯ ನಡುವಿನ ಮಾತುಕತೆ ತಾರಕಕ್ಕೆ ಏರಿದೆ. ಪೊಲೀಸರು ಇದೇ ವೇಳೆ ಹಲ್ಲೆ ಮಾಡಿ ಚಿನ್ನದ ಸರ ಕಸಿದುಕೊಂಡಿದ್ದಾರೆ ಎಂಬುದು ವೆಂಕಿಯ ಆರೋಪ. ಸಾವಿರ ರು. ದಂಡವನ್ನು ನೀಡಬೇಕು. ಲಿಖಿತವಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಡಬೇಕು ಎಂಬ ತಾಕೀತನ್ನು ಪೊಲೀಸರು ಮಾಡಿದರು ಎಂದು ವೆಂಕಿ ಹೇಳುತ್ತಾರೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲಕ್ಕೆ ದಂಡ ನೀಡಿದ್ದೇನೆ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ ಪೊಲೀಸರು ನನ್ನ ಪರ್ಸ್ ತೆಗೆದುಕೊಂಡಿದ್ದರು. ಅದನ್ನು ಹಿಂದಕ್ಕೆ ನೀಡುವಾಗ ಇದ್ದ ಹಣ ಮಾಯವಾಗಿತ್ತು ಎಂದು ವೆಂಕಿ ಆರೋಪ ಮಾಡಿದ್ದಾರೆ.
ಆದರೆ ಇದೆಲ್ಲವನ್ನು ತಳ್ಳಿಹಾಕಿರುವ ಕೆ ಆರ್ ಪುರಂ ಇನ್ಸ್ ಪೆಕ್ಟರ್ ಮಹೇಶ್, ವೆಂಕಿ ಸ್ಥಳಕ್ಕೆ ಬರುವಾಗಲೇ ಮದ್ಯ ಸೇವಿಸಿದ್ದರು. ನಮ್ಮ ಯಾವ ಮಾತನ್ನು ತಲೆಗೆ ಹಾಕಿಕೊಳ್ಳುವಂತೆ ಇರಲಿಲ್ಲ. ನಾವು ಆತನನ್ನು ಪ್ರಶ್ನೆ ಮಾಡಿ ಪ್ರಯೋಜನವಿಲ್ಲ ಎಂಬುದನ್ನು ಅರಿತು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಿಕೊಂಡು ಕಳಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.