ಬೆಂಗಳೂರಲ್ಲಿ 31,498 ಯೂನಿಟ್ ವಿದ್ಯುತ್ ಉಳಿತಾಯǃ
ಬೆಂಗಳೂರು, ಆಗಸ್ಟ್ 03: ಅತ್ತ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ಸುದ್ದಿ ಬರುತ್ತಿದ್ದಂತೆ, ಇತ್ತ ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದ ಸುದ್ದಿಯೊಂದು ಬಂದಿದೆ.
ಬೆಂಗಳೂರಿನ ನಗರಾದ್ಯಂತ 31,808 ನಾಗರಿಕರಲ್ಲಿ ವಿದ್ಯುತ್ ಉಳಿತಾಯದ ಬಗ್ಗೆ ಟಾಟಾ ಪವರ್ ನ ಅಭಿಯಾನಯವಾದ ಕ್ಲಬ್ ಎನರ್ಜಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಟಾಟಾ ಪವರ್ ರಾಷ್ಟ್ರೀಯ ಸಂಪನ್ಮೂಲ ಮತ್ತು ಇಂಧನ ಸಂರಕ್ಷಣಾ ಆಂದೋಲನವಾದ ಕ್ಲಬ್ ಎನರ್ಜಿ ದೇಶಾದ್ಯಂತ ಸಂಪನ್ಮೂಲ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಈ ನಿಟ್ಟಿನಲ್ಲಿ 2016-17 ನೇ ಸಾಲಿನಲ್ಲಿ ಕ್ಲಬ್ ಎನರ್ಜಿ ಬೆಂಗಳೂರಿನ 35,808 ನಾಗರಿಕರನ್ನು ಸಂಪರ್ಕಿಸಿ ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ 31,498 ಯೂನಿಟ್ಗಳ ವಿದ್ಯುತ್ ಉಳಿತಾಯ ಮಾಡಿದೆ.
ವಿದ್ಯುತ್ ಪಡೆದ ವಾರದೊಳಗೆ ಕತ್ತಲಾದ ಕುಗ್ರಾಮ ಮೇದಿನಿ
ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಇಂಧನ ಅಥವಾ ವಿದ್ಯುತ್ ಅನ್ನು ಯಾವ ರೀತಿ ಉಳಿತಾಯ ಮಾಡಬೇಕು, ಉಳಿತಾಯಕ್ಕೆ ಬೇಕಾದ ಸಮರ್ಪಕ ನಿರ್ವಹಣೆಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲೋದ್ದೇಶವಾಗಿದೆ. 2016 ರಲ್ಲಿ ಪ್ರಕೃತಿ ವಿಕೋಪಗಳ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಉಪಕ್ರಮವನ್ನು ಆನ್ಲೈನ್ ಮಾಡ್ಯೂಲ್ ಆಧಾರದಲ್ಲಿ ಆರಂಭಿಸಲಾಯಿತು.
ಕ್ಲಬ್ ಎನರ್ಜಿಯ ಯಶೋಗಾಥೆ 2007 ರಲ್ಲಿ ಮುಂಬೈನ 12 ಶಾಲೆಗಳಲ್ಲಿ ಆರಂಭವಾಯಿತು. ವಿದ್ಯುತ್ ಉಳಿತಾಯ'ದ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರು ಈ ಜಾಗೃತಿ ಸಂದೇಶವನ್ನು ನಾಗರಿಕರವರೆಗೆ ಕೊಂಡೊಯ್ಯುವ ಪೈಲಟ್ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಯಿತು.
ಒಂದೇ ವರ್ಷದಲ್ಲಿ ಈ ಜಾಗೃತಿ ಆಂದೋಲನ ವಿಕಸನಗೊಂಡಿತು. 2008 ರ ವೇಳೆಗೆ ಮುಂಬೈ ಮತ್ತು ಬೆಳಗಾವಿ ನಗರಗಳಲ್ಲಿ 48 ಶಾಲೆಗಳು ಈ ಆಂದೋಲನದಲ್ಲಿ ಕೈಜೋಡಿಸಿದವು. ಕೇವಲ ಮುಂಬೈ ಕೇಂದ್ರಿತವಾಗಿದ್ದ ಈ ಆಂದೋಲನ 2009 ರಲ್ಲಿ ರಾಷ್ಟ್ರಮಟ್ಟಕ್ಕೆ ವಿಸ್ತಾರಗೊಂಡಿತು. 2011 ರಿಂದ ಈ ಕಾರ್ಯಕ್ರಮ ಸಂಪನ್ಮೂಲ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ನಾಗರಿಕರಲ್ಲಿ ಇರಬೇಕಾದ ನೈತಿಕತೆ ಮತ್ತು ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾರಂಭಿಸಿತು.