ಕುನ್ಹಾ ನೀಡಿದ್ದ ದಿಟ್ಟ ತೀರ್ಪನ್ನು ಹಾಡಿ ಹೊಗಳಿದ ಸುಪ್ರೀಂಕೋರ್ಟ್
ಸೆಪ್ಟೆಂಬರ್ 27, 2014ರಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ, ಮಂಗಳೂರಿನ ಮೂಲದ ಜಾನ್ ಮೈಕಲ್ ಡಿಕುನ್ಹಾ ಅವರು ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಹಾಡಿಹೊಗಳಿದೆ.
ಬೆಂಗಳೂರು, ಫೆಬ್ರವರಿ 14 : ಮಂಗಳೂರಿನ ಮೂಲದ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಡಿಕುನ್ಹಾ ಅವರು 2014ರ ಸೆಪ್ಟೆಂಬರ್ 27ರಂದು ನೀಡಿದ ಐತಿಹಾಸಿಕ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ 2017ರ ಫೆಬ್ರವರಿ 14ರಂದು ಎತ್ತಿಹಿಡಿದಿದೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ನೀಡಲಾಗಿರುವ ಈ ಮಹತ್ವದ ತೀರ್ಪು, ಎರಡೂವರೆ ವರ್ಷಗಳ ಹಿಂದೆ, ಪ್ರಾಮಾಣಿಕತೆ ಮತ್ತು ಶುದ್ಧಹಸ್ತಕ್ಕೆ ಹೆಸರಾದ ನ್ಯಾಯಾಧೀಶ ಜಾನ್ ಮೈಕಲ್ ಡಿಕುನ್ಹಾ ಅವರು ನೀಡಿದ ದಿಟ್ಟ ತೀರ್ಪಿಗೆ ಸಂದ ಜಯವಾಗಿದೆ.
ಡಿಕುನ್ಹಾ ಅವರು ಅಂದು ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಮಿತವ ರಾಯ್ ಮತ್ತು ನ್ಯಾ. ಪಿಸಿ ಘೋಷ್ ಅವರು ಹಾಡಿಹೊಗಳಿದ್ದಾರೆ. [LIVE: ಶಶಿಕಲಾ ನಟರಾಜನ್ ಅಪರಾಧಿ, ನಾಲ್ಕುವರ್ಷಗಳ ಶಿಕ್ಷೆ]
ವ್ಯಕ್ತಿ ಎಷ್ಟೇ ದೊಡ್ಡವರಿರಲಿ, ಎಷ್ಟೇ ಪ್ರಭಾವಶಾಲಿಯಾಗಿರಲಿ, ಎಷ್ಟೇ ದುರಂಕಾರದಿಂದ ವರ್ತಿಸಲಿ ಕಾನೂನಿನ ಮುಂದೆ ತಲೆತಗ್ಗಿಸಿ ನಿಲ್ಲಲೇಬೇಕು ಎಂಬುದನ್ನು ಸುಪ್ರೀಂಕೋರ್ಟ್ ನೀಡಿದ ಈ ತೀರ್ಪು ಸಾರಿದೆ. ಶಶಿಕಲಾ ಅವರು ಈಗ ಪರಪ್ಪನ ಅಗ್ರಹಾರದ ರಾಗಿಮುದ್ದೆಯನ್ನು ತಿನ್ನಲೇಬೇಕು, ರಾಗಿ ಬೀಸಲೇಬೇಕು.
ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರಿಗೆ, 66.65 ಕೋಟಿ ರು. ಅಕ್ರಮವಾಗಿ ಗಳಿಸಿದ ಪ್ರಕರಣದಲ್ಲಿ 2014ರ ಸೆಪ್ಟೆಂಬರ್ 27ರಂದು ಜಾನ್ ಮೈಕಲ್ ಡಿಕುನ್ಹಾ ಅವರು ದಿಟ್ಟತನದಿಂದ ತೀರ್ಪು ನೀಡಿದಾಗ ಇಡೀ ನ್ಯಾಯಾಂಗ ವ್ಯವಸ್ಥೆ ಅವರನ್ನು ಹೊಗಳಿತ್ತು.
ಆದರೆ, ದುರಾದೃಷ್ಟವೆಂದರೆ, ಕರ್ನಾಟಕದ ಹೈಕೋರ್ಟ್ ನ ನ್ಯಾಯಮೂರ್ತಿ ಕುಮಾರಸ್ವಾಮಿ ಅವರು ಕೇವಲ ನಾಲ್ಕೇ ನಾಲ್ಕು ನಿಮಿಷಗಳಲ್ಲಿ ಜಾನ್ ಮೈಕಲ್ ಡಿಕುನ್ಹಾ ಅವರ ತೀರ್ಪನ್ನು ಕಸದಬುಟ್ಟಿಗೆ ಎಸೆದಿದ್ದರು. ಪರಪ್ಪನ ಅಗ್ರಹಾರದಲ್ಲಿ ರಾಗಿಮುದ್ದೆ ಉಂಡು ಬಂದಿದ್ದ ಜಯಲಲಿತಾ ಮತ್ತು ಇತರರು ಕ್ಷಣಾರ್ಧದಲ್ಲಿ ಹೊರಬಂದಿದ್ದರು.