ಕೇಂದ್ರ ಬಜೆಟ್ ಗೆ ಷೇರು ಮಾರುಕಟ್ಟೆ ಸಕಾರಾತ್ಮಕ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರವರಿ 1: ಕೇಂದ್ರ ಬಜೆಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ. ಜನರ ನಿರೀಕ್ಷೆಯನ್ನು ಈ ಬಾರಿಯ ಬಜೆಟ್ ತಲುಪದೇ ಇರಬಹುದು. ಆದರೆ ಇದರಿಂದ ಆರ್ಥಿಕತೆಗೆ ಯಾವುದೇ ಹಾನಿಯಿಲ್ಲ ಎಂಬುದು ತಜ್ಞರ ಅಭಿಮತ. ದೀರ್ಘಕಾಲೀನ ಬಂಡವಾಳದ ಮೇಲಿನ ತೆರಿಗೆ ಹಾಕುವ ಅವಧಿಯನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಸಲಾಗಿದೆ.
ರಿಯಲ್ ಎಸ್ಟೇಟ್ ನಲ್ಲಿ ವ್ಯವಹಾರ ಹೆಚ್ಚಾಗಲು ಇದು ಪೂರಕವಾಗುತ್ತದೆ. ರಾಜ್ಯ ಸರಕಾರಗಳಿಗೆ ನೋಂದಣಿ ಹಾಗೂ ಮುದ್ರಾಂಕದ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನು ಆದಾಯ ತೆರಿಗೆ ವಿಚಾರ. 2.5 ಲಕ್ಷದಿಂದ 5 ಲಕ್ಷ ರುಪಾಯಿವರೆಗಿನ ಆದಾಯ ಇರುವವರಿಗೆ ಈ ಹಿಂದೆ ಶೇ 10ರಷ್ಟು ತೆರಿಗೆ ಹಾಕಲಾಗುತ್ತಿತ್ತು. ಅದನ್ನು ಶೇ 5ಕ್ಕೆ ಇಳಿಸಲಾಗಿದೆ. ಇದರಿಂದ ತೆರಿಗೆ ಪಾವತಿಸಲು ಉತ್ತೇಜನ ನೀಡಿದಂತಾಗುತ್ತದೆ.
ಇನ್ನು ಕೃಷಿಗಾಗಿ, ನರೇಗಾ ಯೋಜನೆಗಾಗಿ ಮೀಸಲಿಟ್ಟಿರುವ ಹಣದಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. "ಈ ಬಾರಿಯ ಬಜೆಟ್ ಗೆ ಷೇರು ಮಾರುಕಟ್ಟೆ ಪ್ರತಿಸ್ಪಂದನೆ ಸಕಾರಾತ್ಮಕವಾಗಿದೆ. ಸೆನ್ಸೆಕ್ಸ್ 400 ಅಂಶ ಹಾಗೂ ನಿಫ್ಟಿ 100ಕ್ಕೂ ಹೆಚ್ಚು ಅಂಶ ಏರಿಕೆ ಕಂಡಿದೆ. ಗೃಹ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿ, ವಿದೇಶಿ ಬಂಡವಾಳಕ್ಕೆ ಪೂರಕವಾಗಿದೆ" ಎಂದು ಷೇರು ದಲ್ಲಾಳಿಗಳು, ಅಂಕಣಕಾರರು ಆದ ಕೆ.ಜಿ.ಕೃಪಾಲ್ ಅವರು ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದರು.
ಇನ್ನು ಮೂರು ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಪಾರದರ್ಶಕತೆ ಹೆಚ್ಚಲಿದೆ. ಆರ್ಥಿಕ ಅಪರಾಧಗಳ ತಡೆಗೆ ಹೊಸ ಕಾನೂನು ಜಾರಿ ಮಾಡಲು ಕೇಂದ್ರ ಸರಕಾರ ಮುಮ್ದಾಗಿರುವುದರಿಂದ ಬ್ಯಾಂಕ್ ಗಳ ಅನುತ್ಪಾದಕ ಸಾಲಗಳ ಹೊಡೆತಕ್ಕೆ ಒಂದು ಪರಿಹಾರ ಸಿಗುವ ಸಾಧ್ಯತೆ ಇದೆ.