ನಗುತ್ತಾ,ನಗಿಸುತ್ತಿದ್ದರೆ ಹೃದಯ ಆರೋಗ್ಯ ನಿಮ್ಮಂತೆ ಹಸನ್ಮುಖಿ
ಬೆಂಗಳೂರು, ಸೆಪ್ಟೆಂಬರ್, 30 : ಮಾನವನ ಜೀವನಾಡಿಯಾದ ಹೃದಯ ಬದುಕಿನ ಮೊದಲ ಪುಟ, ಪದ ಎಲ್ಲವೂ ಹೌದು. ಪಟಪಟನೆ ಪುಟಿಯುತ್ತಾ ಜೀವನದ ಆತ್ಮವಿಶ್ವಾಸದ ನೀಳಲೆಯನ್ನು ಹೆಚ್ಚಿಸುವ ಮುಷ್ಠಿಗಾತ್ರದ ಹೃದಯ, ಕನಸು ನನಸುಗಳೆಂಬ ಸಾವಿರಾರು ನಾಡಿಗಳೊಂದಿಗೆ ಮಾನವನ ದೇಹ ಬಂಡಿ ಎಳೆಯುತ್ತಿರುವ ಭಾವನಾತ್ಮಕವಾದ ಪುಟ್ಟ ಗೂಡು.
ಹಿಂದೆಲ್ಲಾ ದೈತ್ಯಾಕಾರ ದೇಹದಲ್ಲಿ ಹುಣಸೇ ಬೀಜದಂತಿರುವ ಹೃದಯ ಹಾಳಾದರೆ ಸಾವು ಖಚಿತವಾಗಿತ್ತು. ಆದರೆ ಇಂದು ವಿಜ್ಞಾನ ವಲಯ ನಮ್ಮ ಜ್ಞಾನ ವಲಯಕ್ಕೆ ನಿಲುಕದಂತೆ ಬೆಳೆದು ನಿಂತಿದೆ. ಯಾವಾಗ ಜನರಿಗೆ ವಿಜ್ಞಾನ ಪ್ರಪಂಚದ ಸಾಧ್ಯತೆಗಳು ಪರಿಚಯವಾಯಿತೋ ಅಲ್ಲಿಂದ ಬೆಚ್ಚಿ ಬೀಳಿಸುವ, ಅಚ್ಚರಿಗೊಳಿಸುವ ಹಲವಾರು ಘಟನೆಗಳಿಗೆ ದೇಶ, ರಾಜ್ಯ ಸಾಕ್ಷಿಯಾಯಿತು.
ಹೃದಯದ ವಿಚಾರಕ್ಕೆ ಬಂದಾಗ ಅಗ್ರ ಪಂಕ್ತಿಯಲ್ಲಿ ನಿಲ್ಲುವುದು 34 ವರ್ಷದ ರೀನಾ ರಾಜು. ಏಕೆಂದರೆ ಈಕೆ ಹೃದಯ ಕಸಿಗೆ ಒಳಗಾದ ರಾಜ್ಯದ ಮೊದಲ ಮಹಿಳೆ. ರೀನಾ ಆರು ವರ್ಷಗಳ ಹಿಂದೆ ಹೃದಯ ಕಸಿಗೆ ಒಳಗಾಗಿದ್ದಳು. ಇವರು ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಒನ್ ಇಂಡಿಯಾದೊಂದಿಗೆ ತಮ್ಮ ಭಾವಾಂತರಂಗವನ್ನು ತೆರೆದಿಟ್ಟಿದ್ದಾರೆ.[ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು]
ಕೆಲವು ವರ್ಷಗಳ ಹಿಂದೆ ಸಾವು ಬದುಕಿನ ಆಟದಲ್ಲಿ ಇದ್ದ ಈಕೆ ಇದೀಗ ಲೈಟ್ ಎ ಲೈಫ್ ಎಂಬ ಎನ್ ಜಿಒ ಸಂಸ್ಥೆ ತೆರೆದು ಬದುಕನ್ನು ಹಾಡುತ್ತಾ, ಕುಣಿಯುತ್ತಾ, ಜನರ ಸೇವೆ ಮಾಡುತ್ತಾ ಕಳೆಯುತ್ತಿರುವ ಈಕೆ ಹಲವಾರು ಜನರಿಗೆ ಚೈತನ್ಯ ನೀಡುತ್ತಿರುವ ಇವರು, 'ಗಗನಕ್ಕೇರಿದ ವೈದ್ಯಕೀಯ ಸೌಲಭ್ಯಗಳು, ಹೃದಯ ದಾನವಂತರ ಅಲಭ್ಯತೆ ಇನ್ನಿತರ ಕಾರಣಗಳಿಂದ ಜಗತ್ತಿನಲ್ಲಿ ಹೃದಯ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಅಂಗಾಂಗ ದಾನ ಮಾಡಲು ಜನರು ಹೆಚ್ಚು ಮನಸ್ಸು ಮಾಡಬೇಕಿದೆ' ಎಂದು ನುಡಿಯುತ್ತಾರೆ.
ಪುಟಾಣಿ ಹೃದಯದ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುವ ಇವರು, ;ಅಡುಗೆಯಲ್ಲಿ ಕಡಿಮೆ ಎಣ್ಣೆ, ಕೊಂಚ ಉಪ್ಪು ಬಳಸಬೇಕು. ಮಾಂಸಧಾರಿತ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಹೆಚ್ಚಾಗಿ ವ್ಯಾಯಾಮಕ್ಕೆ ತಮ್ಮ ದೇಹವನ್ನು ಒಡ್ಡಬೇಕು, ಆರೋಗ್ಯದ ಬಗ್ಗೆ ಹೆಜ್ಜೆ ಹೆಜ್ಜೆಗೂ ಕಾಳಜಿ ವಹಿಸಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು' ಎಂಬುದನ್ನು ಹೇಳಲು ಮರೆಯುವುದಿಲ್ಲ.[ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]
ಹೃದಯ ಕಸಿ ಕಾರ್ಯಾಚರಣೆಗಾಗಿ 'ಲೈಟ್ ಎ ಲೈಫ್ ಎನ್ ಜಿಓ' ಆರಂಭಿಸಿರುವ ಇವರು ಹೃದಯ ರೋಗಿಗಳ ವೈದ್ಯಕೀಯ ಹಣವನ್ನು ಭರಿಸಲು ಅವರಿಗೆ ಗೊತ್ತಿರುವ ಹಲವಾರು ಉದ್ಯಮಿಗಳ ಸಹಕಾರದ ಮೊರೆ ಹೋಗಿ ಹಲವಾರು ಸಾಮಾನ್ಯ ಜನರ ಬದುಕನ್ನ ಹಸನುಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 5 ಲಕ್ಷ ಖರ್ಚಾದರೆ, ಖಾಸಗಿ ಆಸ್ಪತ್ರೆಗಳಲ್ಲಿ 10 ರಿಂದ 15 ಲಕ್ಷ ಹೃದಯ ಕಸಿಗೆ ಬೇಕಾಗುತ್ತದೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ಯು ಟಿ ಖಾದರ್ ಅವರೇ ಖುದ್ದಾಗಿ ಲೈಟ್ ಎ ಲೈಫ್ ಎನ್ ಜಿಓ ಫೌಂಡೇಶನ್ ಗೆ ಭೇಟಿಯಾಗಿ ಬಡತನ ರೇಖೆಗಿಂತ ಕೆಳಗಿನ ಮಂದಿ ಹೃದಯ ರೋಗಕ್ಕೆ ತುತ್ತಾದವರಿಗೆ ಉಚಿತ ಹೃದಯ ಸಂಬಂಧಿತ ಔಷಧಿ ನೀಡುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ.
'ಜನರು ಆದಷ್ಟು ಮಟ್ಟಿಗೆ ಧೂಮಪಾನದಿಂದ ದೂರವಾಗಿ ಒತ್ತಡದ ಬದುಕನ್ನು ಬಿಟ್ಟು ಯಾವಾಗಲೂ ತಾವು ನಗುತ್ತಾ ಇನ್ನೊಬ್ಬರನ್ನು ನಗಿಸುತ್ತಿರಬೇಕು, ಹೃದಯದ ಆರೋಗ್ಯದ ಕಡೆ ಗಮನ ಹರಿಸಿ ಎಂದು ಆರೋಗ್ಯ ಒಳಗುಟ್ಟನ್ನು ನಗುತ್ತಲೇ ಹೇಳುತ್ತಾರೆ ರೀನಾ.