ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣದಲ್ಲಿ ಭರದ ಸಿದ್ಧತೆ
ನಮ್ಮ ಮೆಟ್ರೋ ಹಸಿರು ಮಾರ್ಗದಗ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲಿ ಹೂಗಳ ಅಲಂಕಾರ. ಜನರಿಂದ ಕಾತುರದ ನಿರೀಕ್ಷೆ. ನಿಲ್ದಾಣಗಳಲ್ಲಿ ಮಾಹಿತಿಗಾಗಿ ಜಮಾಯಿಸಿದ್ದ ಜನರು.
ಬೆಂಗಳೂರು, ಜೂನ್ 17: ಬೆಂಗಳೂರಿಗರು ಕಾತುರದಿಂದ ನಿರೀಕ್ಷಿಸುತ್ತಿರುವ ನಮ್ಮ ಮೆಟ್ರೋನ ಹಸಿರು ಮಾರ್ಗದ ಉದ್ಘಾಟನೆಗೆ ಶನಿವಾರ ಬೆಳಗ್ಗೆ (ಜೂನ್ 17) ಕ್ಷಣಗಣನೆ ಆರಂಭವಾಗಿತ್ತು.
ಸಂಜೆ ವೇಳೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಮಾರ್ಗವನ್ನು ಉದ್ಘಾಟಿಸುವ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಕಾತುರ ಮನೆ ಮಾಡಿತ್ತು.
ಈ ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ಬಣ್ಣಬಣ್ಣದ ಬಲೂನುಗಳು ಹಾಗೂ ಹೂ ಹಾರಗಳನ್ನು ಕಟ್ಟಿ ಅಲಂಕೃತಗೊಳಿಸಲಾಗಿತ್ತು. ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜನಗಳ ಕಾತರ ಎಷ್ಟಿತ್ತೆಂದರೆ, ಶನಿವಾರ ಸಂಜೆ ಉದ್ಘಾಟನೆ ಎಂದು ಪ್ರಕಟಗೊಂಡಿತ್ತಾದರೂ, ಶನಿವಾರ ಬೆಳಗ್ಗಿನಿಂದಲೇ ಮೆಟ್ರೋ ನಿಲ್ದಾಣಗಳ ಬಳಿ ಬಂದು ಜನರು ಎಷ್ಟೊತ್ತಿಗೆ ಶುರುವಾಗುತ್ತೆ, ಯಾವಾಗ ಒಳಗೆ ಬಿಡ್ತೀರಿ ಎಂದು ಭದ್ರತಾ ಸಿಬ್ಬಂದಿಯನ್ನು ಕೇಳುತ್ತಿದ್ದರು.
ಅದಕ್ಕೆ ಭದ್ರತಾ ಸಿಬ್ಬಂದಿಯು ಇಂದು ಸಂಜೆ ಉದ್ಘಾಟನೆ, ಭಾನುವಾರ ಬೆಳಗ್ಗೆಯಿಂದ ಮೆಟ್ರೋಗೆ ಚಾಲನೆ ಎಂದು ಹೇಳಿದ್ದರಿಂದ ಹಲವಾರು ಮಂದಿ ನಿರಾಸೆಗೊಂಡು ಹಿಂದಿರುಗುತ್ತಿದ್ದುದು ಸಾಮಾನ್ಯವಾಗಿತ್ತು.
ಮೆಟ್ರೋ ನಿಲ್ದಾಣಗಳ ಅಕ್ಕಪಕ್ಕದ ರಸ್ತೆಗಳ ಅಂಗಡಿಗಳ ವರ್ತಕರು ಮೆಟ್ರೋಗೆ ಶುಭವಾಗಲಿ ಎಂದು ಅಲ್ಲಲ್ಲಿ ಚಿಕ್ಕ ಪುಟ್ಟ ಬೋರ್ಡುಗಳನ್ನು ಬರೆಸಿ ಹಾಕಿದ್ದು ಈ ಪ್ರದೇಶಗಳ ಜನರ ಆನಂದವನ್ನು ಪ್ರಚುತ ಪಡಿಸುತ್ತಿತ್ತು.
ಅಂತೂ ಇಂತೂ, ಈ ಭಾಗದಲ್ಲಿ ಮೆಟ್ರೋ ಸೌಕರ್ಯ ಸಿಗಲಿದೆ ಎಂಬ ವಿಚಾರವೇ ಈ ಪ್ರಾಂತ್ಯಗಳಲ್ಲಿನ ಜನರಿಗೆ ಹೆಚ್ಚು ಆಪ್ಯಾಯಮಾನವಾಗಿರುವುದರಲ್ಲಿ ಎರಡು ಮಾತಿಲ್ಲ.