ಜೆಡಿಎಸ್ ರಮೇಶ್ ಬಾಬುಗೆ ಗೆಲುವು, ಕಾಂಗ್ರೆಸ್ಸಿಗೆ ಠೇವಣಿ ನಷ್ಟ
ಆಗ್ನೇಯ ಶಿಕ್ಷಕರ ಕ್ಷೇತ್ರ ಉಪಚುನಾವಣೆ ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಮುನ್ನೆಡೆಯನ್ನು ಸಾಧಿಸಿದ ಜೆಡಿಎಸ್ ನ ರಮೇಶ್ ಬಾಬು ಉತ್ತಮ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಬೆಂಗಳೂರು, ಫೆಬ್ರವರಿ 7: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಮತ ಎಣಿಕೆಯಲ್ಲಿ ಜೆಡಿಎಸ್ ನ ರಮೇಶ್ ಬಾಬು 10,014 ಮತಗಳಿಂದ ಮುನ್ನೆಡೆ ಸಾಧಿಸಿ ತೆನೆ ಹೊತ್ತ ಮಹಿಳೆಗೆ ಸಂತಸವನ್ನುಂಟು ಮಾಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿ ಹೆಬ್ಬಾಳದಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಸಂಬಂಧ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್ ಮುನ್ನೆಡೆ ಸಾಧಿಸಿದ್ದು, ರಮೇಶ್ ಬಾಬು ಅವರಿಗೆ ಬಿಜೆಪಿ ಅಭ್ಯರ್ಥಿ ಪಿ.ಎಸ್.ಬಸವರಾಜು ಪ್ರಬಲ ಪೈಪೋಟಿ ನೀಡಿದರು. ಬಸವರಾಜು ಪಡೆದ ಮತಗಳು 6199. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿರಂಜನ್ ಠೇವಣಿ ಕಳೆದುಕೊಂಡಿದ್ದು, ಪಕ್ಷಕ್ಕೆ ಮುಖಭಂಗವಾಗಿದೆ.[ಆಗ್ನೇಯ ಶಿಕ್ಷಕರ ಕ್ಷೇತ್ರ ಉಪಚುನಾವಣೆ: ಫೆ.3 ರಂದು ರಜೆ]
ಒಟ್ಟು ಈ ಕ್ಷೇತ್ರಗಳಲ್ಲಿ ಮಹಿಳೆ ಮತ್ತು ಪುರುಷರು ಸೇರಿ ಒಟ್ಟು 21,354 ಮತದಾರರಿದ್ದು, ಆ ಪೈಕಿ 18,249 ಜನ ಮತ ಚಲಾಯಿಸಿದ್ದರು. ಶೇ. 85.46 ರಷ್ಟು ಮತದಾನವಾಗಿತ್ತು. ಜೆಡಿಎಸ್ ನಿಂದ ರಮೇಶ್ ಬಾಬು, ಬಿಜೆಪಿಯಿಂದ ಪೆಪ್ಸಿ ಬಸವರಾಜು, ಕಾಂಗ್ರೆಸ್ ಅಭ್ಯರ್ಥಿ ಟಿ.ಎಸ್. ನಿರಂಜನ್ ಹಾಗೂ ಜೆಡಿಎಸ್ ಅಭ್ಯರ್ಥಿ ಅರವಿಂದ್ ಕಣದಲ್ಲಿದ್ದರು.
ಮೊದಲ ಪ್ರಾಶಸ್ತ್ಯದ ಮತ ಎಣಿಕೆ
ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ರಮೇಶ್ಬಾಬು 5,247 ಮತ ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪೆಪ್ಸಿ ಬಸವರಾಜ್ 4,947 ಮತ ಪಡೆದಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿ ಅರವಿಂದ್ 746 ಮತ ಕಸಿದುಕೊಂಡರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಟಿ.ಎಸ್. ನಿರಂಜನ್ ಕೇವಲ 496 ಮತ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೊತೆಗೆ ಒಟ್ಟು 1,237 ಮತಗಳು ತಿರಸ್ಕೃತಗೊಂಡಿವೆ.
ಎರಡನೇ ಪ್ರಾಶಸ್ತ್ಯದಲ್ಲಿಯೂ ಜೆಡಿಎಸ್ ಸಾಧನೆ
ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದು. ಜೆಡಿಎಸ್ ಅಭ್ಯರ್ಥಿ 5650, ಬಿಜೆಪಿ ಅಭ್ಯರ್ಥಿ 4900 ಮತ ಪಡೆದಿದ್ದಾರೆ. ತಡರಾತ್ರಿ ವರೆಗೂ ಎಣಿಕೆ ಕಾರ್ಯ ಮುಂದುವರೆದಿತ್ತು. ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ರಮೇಶ್ ಬಾಬು ಅವರು 10,014 ಮತಗಳನ್ನು ಪಡೆದು ಜಯಗಳಿಸಿದರು.
ಶಿಕ್ಷಕರ ಮತಗಳೇ ತಿರಸ್ಕೃತ
ಮತ ಎಣಿಕೆ ಕೇಂದ್ರದಲ್ಲಿ ಎರಡು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ, ಎಣಿಕೆ ಕಾರ್ಯವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿದೆ. ಚುನಾವಣೆಯಲ್ಲಿ 1,237 ಶಿಕ್ಷಕರ ಮತಗಳು ತಿರಸ್ಕೃತವಾಗಿದ್ದು, ಬಹುತೇಕ ಶಿಕ್ಷಕರು ಚುನಾವಣೆಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ಜೆಡಿಎಸ್ ಗೆ ದೇವೇಗೌಡರಿಂದ ಪ್ರಚಾರ
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಪ್ರಚಾರ ಮಾಡಿದ್ದರು. ಅದೇ ರೀತಿ ತಮಗೆ ಟಿಕಟ್ ಸಿಗಲಿಲ್ಲ ಎಂದು ಹರಿಹರ ಶಾಸಕ ಶಿವಶಂಕರ್ ಸಹೋದರ ಅರವಿಂದ್ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್ನ ಅಧಿಕೃತ ಅಭ್ಯರ್ಥಿ ರಮೇಶ್ಬಾಬುಗೆ ಸೆಡ್ಡು ಹೊಡೆದಿದ್ದರು. ರಮೇಶ್ಬಾಬು ಪರ ಜೆಡಿಎಸ್ ಪರಮೋಚ್ಚ ನಾಯಕ ದೇವೇಗೌಡರೇ ಪ್ರಚಾರ ನಡೆಸಿದ್ದರು.
ನಾರಾಯಣಸ್ವಾಮಿ ರಾಜೀನಾಮೆ ಜೆಡಿಎಸ್ ಗೆ ವರ
ವಿಧಾನಪರಿಷತ್ ಸದಸ್ಯರಾಗಿದ್ದ ವೈ.ಎ.ನಾರಾಯಣಸ್ವಾಮಿ ಅವರು ಹೆಬ್ಬಾಳ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. ಆದ್ದರಿಂದ, ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಉಪ ಚುನಾವಣೆ ಎದುರಾಗಿತ್ತು.