ಆಭರಣ ಖರೀದಿ ಬಿಲ್ನಲ್ಲಿ ಪರಿಶುದ್ಧತೆ ನಮೂದಿ ಕಡ್ಡಾಯ
ಬೆಂಗಳೂರು, ಫೆ. 16: ಆಭರಣ ಖರೀದಿ ವೇಳೆ ಗ್ರಾಹಕರಿಗೆ ಭಾರೀ ವಂಚನೆಯಾಗುತ್ತಿರುವ ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ. ಆದ್ದರಿಂದ ಗ್ರಾಹಕರಿಗೆ ವಂಚನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಇನ್ನು ಮುಂದೆ ಚಿನ್ನ, ಬೆಳ್ಳಿ, ವಜ್ರಾಭರಣ ಖರೀದಿ ಸಂದರ್ಭ ಮಾರಾಟಗಾರರು ಗ್ರಾಹಕರಿಗೆ ನೀಡುವ ಬಿಲ್ಗಳಲ್ಲಿ ಕಡ್ಡಾಯವಾಗಿ ಆಭರಣಗಳು ಹೊಂದಿರುವ ಪರಿಶುದ್ಧ ಚಿನ್ನದ ಪ್ರಮಾಣವನ್ನೂ ನಮೂದಿಸಬೇಕೆಂದು ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಇದಕ್ಕಾಗಿ ಕರ್ನಾಟಕ ಲೀಗಲ್ ಮೆಟ್ರಾಲಜಿ (ಎನ್ಫೋರ್ಸ್ಮೆಂಟ್) ನಿಯಮಗಳು 2011ಕ್ಕೆ ತಿದ್ದುಪಡಿ ತರಲಾಗುವುದು. ಈ ಕುರಿತು ಕೇಂದ್ರ ಸರ್ಕಾರದ ಅನುಮೋದನೆ ಶೀಘ್ರ ಪಡೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಕರ್ನಾಟಕ ಲೀಗಲ್ ಮೆಟ್ರಾಲಜಿ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಚಿನ್ನಾಭರಣ ವರ್ತಕರು ನೀಡುವ ಬಿಲ್ನಲ್ಲಿ ಆಭರಣಗಳ ಪರಿಶುದ್ಧತೆಯನ್ನು ಕ್ಯಾರೆಟ್ನಲ್ಲಿ ನಮೂದಿಸಬೇಕು. ನಿಖರ ತೂಕ ಹಾಗೂ ಬೆಲೆ ಬರೆಯುವುದನ್ನೂ ಕಡ್ಡಾಯಗೊಳಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.