ಮಾರ್ಚ್ 18ರಂದು ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
ಬೆಂಗಳೂರು, ಮಾರ್ಚ್ 14: ಮಂಡ್ಯದ ಮೇಲುಕೋಟೆಯ ಯದುಗಿರಿ ಯತಿರಾಜ ಮಠವು ತಿರುಮಲ ತಿರುಪತಿ ದೇವಸ್ಥಾನಂ ಸಹಯೋಗದಲ್ಲಿ ಮಾರ್ಚ್ 18ರ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ಶೀಷ ಮಹಲ್ ನಲ್ಲಿ ಸಂಜೆ 6ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಿದೆ.
ಈ ವಿಶೇಷ ಪೂಜೆ ವೇಳೆ ಸಾವಿರಾರು ಭಕ್ತಾದಿಗಳು ಆಗಮಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ರಾಮಾನುಜಾಚಾರ್ಯರ (1017-1137) 1000ನೇ ವರ್ಷಾಚರಣೆಯೂ ಆಗಿದೆ. ಆಚಾರ್ಯ ರಾಮಾನುಜರು 11ನೇ ಶತಮಾನದಲ್ಲಿ ಸಮಾಜ ಸುಧಾರಕರಾಗಿ ಸಮಾಜವನ್ನು ತಿದ್ದಿ ಮುನ್ನಡೆಯುವ ಕಾಯಕ ಮಾಡಿದವರು.[ಸಿಡ್ನಿ ಫೆಸ್ಟಿವಲ್ ನಲ್ಲಿ ಶ್ರೀಕೃಷ್ಣನ ಅವಹೇಳನ ಕಲಾಕೃತಿ: ಹಿಂದೂಗಳು ಗರಂ]
ಆ ಕಾಲದಲ್ಲಿಯೇ ಹಿಂದುಳಿದವರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದವರನ್ನು ದೇವಾಲಯಗಳಿಗೆ ಪ್ರವೇಶಿಸುವಂತೆ ಮಾಡಿದ ಕ್ರಾಂತಿಕಾರಕ ಸುಧಾರಕರಾಗಿದ್ದರು.
ಯದುಗಿರಿ ಯತಿರಾಜ ಮಠದ 41 ನೇ ಪೀಠಾಧಿಪತಿಗಳಾಗಿರುವ ಯತಿರಾಜ ಜೀಯರ್ ಸ್ವಾಮೀಜಿ ಈ ಕಲ್ಯಾಣೋತ್ಸವದ ಬಗ್ಗೆ ಮಾತನಾಡಿ, 'ರಾಮಾನುಜಾಚಾರ್ಯರ ಸಹಸ್ರ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಠವು 6 ವರ್ಷಗಳಿಂದ ಹಲವಾರು ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.[ಅಮೆರಿಕ ಜೋಡಿಗೆ ಮೈಸೂರಿನಲ್ಲಿ ಸಂಪ್ರದಾಯಬದ್ಧ ನಿಶ್ಚಿತಾರ್ಥ]
"ಈ ಆಚರಣೆ ಕೇವಲ ಹಬ್ಬ/ಪ್ರಾರ್ಥನೆ ಅಥವಾ ಸಂಪ್ರದಾಯದ ಕಾರ್ಯಕ್ರಮವಲ್ಲ. ಬದಲಿಗೆ ರಾಮಾನುಜರು ಹಾಕಿಕೊಟ್ಟ ನಿರ್ವಹಣೆ ಸಾಮರ್ಥ್ಯ, ಮೌಲ್ಯಾಧಾರಿತ ನೀತಿಗಳು, ಪರಿಣಾಮಕಾರಿಯಾದ ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಎಲ್ಲಾ ಭಾರತೀಯರ ಸಾಮಾಜಿಕ-ಆರ್ಥಿಕ ಕಾರ್ಯಚಟುವಟಿಕೆಗಳನ್ನು ವೃದ್ಧಿಸುವುದಾಗಿದೆ' ಎಂದು ಹೇಳಿದ್ದಾರೆ.