ಜನವರಿ 2ರಂದು ಬಿಜೆಪಿ ಸೇರಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ
ಬೆಂಗಳೂರು, ಡಿಸೆಂಬರ್ 24: ಸಿಎಂ ಮೇಲೆ ಮುನಿಸಿಕೊಂಡು ಕಾಂಗ್ರೆಸ್ಸಿನಿಂದ ಹೊರಬಂದಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಜನವರಿ 2ರಂದು ಬಿಜೆಪಿ ಪಕ್ಷವನ್ನು ಸೇರುವುದಾಗಿ ತಮ್ಮ ನಿವಾಸದಲ್ಲಿ ತಿಳಿಸಿದ್ದಾರೆ.
ಜನವರಿ ಎರಡರಂದು ನಾನು ಬಿಜೆಪಿ ಸೇರಲು ತೀರ್ಮಾನ ಮಾಡಿದ್ದೇನೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದು, ತಮ್ಮ ರಾಜಕೀಯ ಜೀವನದ ಕೊನೆಯ ದಿನಗಳನ್ನು ಭಾರತೀಯ ಜನತಾ ಪಕ್ಷದಲ್ಲಿ ಸ್ವಾಭಿಮಾದಿಂದ ಕಳೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.[ಶಾಸಕ ಸ್ಥಾನಕ್ಕೆ ವಿ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ]
ಶ್ರೀನಿವಾಸ್ ಪ್ರಸಾದ್ ಅವರ ಡಾಲರ್ಸ್ ಕಾಲೋನಿಯಲ್ಲಿರುವ ಬೆಂಗಳೂರಿನ ನಿವಾಸಕ್ಕೆ ರಾಜ್ಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಭೇಟಿ ನೀಡಿ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದರು.
ಬಿಜೆಪಿಯಿಂದ ನಂಜನಗೂಡಿನಲ್ಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಬಿಎಸ್ ವೈ ಮಾತನಾಡಿದ್ದು, ಶ್ರೀನಿವಾಸ್ ಪ್ರಸಾದ್ ಅವರ ಮನವೊಲಿಸಿದರು. ನಂತರ ಮಾತನಾಡಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಯಾವುದೇ ಷರತ್ತು ಹಾಕಿಲ್ಲ, ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅವರು ಮುಂದಿನ ಉಪಚುನಾವಣೆಯಲ್ಲಿ ಗೆದ್ದೇಗೆಲ್ಲುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಜನವರಿ ಎರಡರಂದು ಬಿಜೆಪಿ ಹಿರಿಯ ಮುಖಂಡರ ಸಮ್ಮುಖದಲ್ಲಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯನ್ನು ಸೇರಲಿದ್ದಾರೆ.