ಸೌಂದರ್ಯದ ನಂದಿಬೆಟ್ಟದಲ್ಲಿ ಯಶಸ್ವಿಯಾಯ್ತು ಯೋಗಶಿಬಿರ
ಬೆಂಗಳೂರು, ಅಕ್ಟೋಬರ್, 05 : ನಗರದ ಶ್ರೀ ಯೋಗ ಕೇಂದ್ರ ಪ್ರಸಿದ್ದ ನಂದಿ ಬೆಟ್ಟದಲ್ಲಿ ಭಾನುವಾರ ಯೋಗ ಶಿಬಿರ ಹಮ್ಮಿಕೊಂಡಿತ್ತು. ಯೋಗ ಶಿಬಿರದಲ್ಲಿ ಪಾಲ್ಗೊಂಡ ಹಲವಾರು ಮಂದಿ ನಾನಾ ಆಸನಗಳನ್ನು ಪರಿಚಯ ಮಾಡಿಕೊಂಡು ಅವುಗಳನ್ನು ಪ್ರದರ್ಶನಗೈದರು.
ನಂದಿ ಬೆಟ್ಟದಲ್ಲಿ ಆಯೋಜನೆಗೊಂಡಿದ್ದ ಈ ಯೋಗ ಶಿಬಿರದಲ್ಲಿ ಶ್ರೀ ಯೋಗ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರವಾಸಿಗರು ಪಾಲ್ಗೊಂಡು ಶ್ರದ್ಧೆಯಿಂದ ಪ್ರಾಣಾಯಮ ಮತ್ತು ಯೋಗಾಸನಗಳನ್ನು ಕಲಿತು ಶಿಬಿರವನ್ನು ಯಶಸ್ವಿಗೊಳಿಸಿದರು.
ಶಿಬಿರವು ನಂದಿ ಬೆಟ್ಟಕ್ಕೆ ಆಗಮಿಸುವ ಸಹಸ್ರಾರು ಜನರಿಗೆ ಯೋಗದ ಸತ್ಪರಿಣಾಮದ ಕುರಿತಾಗಿ ಅರಿವು ಮೂಡಿಸುವುದು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡುವ ಉದ್ದೇಶ ಹೊಂದಿತ್ತು.[ನಂದಿ ಬೆಟ್ಟ ಅಭಿವೃದ್ಧಿ ಯೋಜನೆಗೆ 40 ಕೋಟಿ ಅನುದಾನ]
ಯೋಗ ಶಿಬಿರದಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿದ್ದು ವಿಶೇಷವಾಗಿದ್ದು, ಪ್ರವಾಸಿ ತಾಣದ ವೀಕ್ಷಣೆಯಿಂದ ಕಣ್ಣಿಗೆ, ಮನಸ್ಸಿಗೆ ಆನಂದ ಕೊಂಡೊಯ್ಯುವುದರ ಜೊತೆಯಲ್ಲಿ, ದೇಹದ ಆರೋಗ್ಯದ ಕುರಿತಾಗಿ ಸಲಹೆ ಪಡೆದುಕೊಂಡರು.
ನಂದಿಬೆಟ್ಟ ಎಲ್ಲಿದೆ?
ಬಹಳ ಪ್ರಾಚೀನ ಬೆಟ್ಟಗಳ ಸಾಲಿಗೆ ನಿಲ್ಲುವ ನಂದಿಬೆಟ್ಟ ಪ್ರವಾಸಿಗರ ಆಕರ್ಷಣ ತಾಣ. ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು, ಬೆಂಗಳೂರಿಂದ 45 ಕಿ.ಮೀ ಹಾಗೂ ಚಿಕ್ಕಬಳ್ಳಾಪುರದಿಂದ 10 ಕಿ.ಮೀ ದೂರದಲ್ಲಿದೆ. ಬೆಟ್ಟವು ಮೂರು ಪಟ್ಟಣಗಳ ನಡುವೆ ನೆಲೆಸಿದೆ.[ನಂದಿಬೆಟ್ಟ ಅತಿಥಿಗೃಹವನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿ]
ನಂದಿಬೆಟ್ಟಕ್ಕೆ ಮೊದಲು ಏನೆಂದು ಹೆಸರಿತ್ತು?
ಚೋಳರ ಕಾಲದಲ್ಲಿ ನಂದಿಬೆಟ್ಟವನ್ನು ಆನಂದಗಿರಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಸುಮಾರು 1300 ವರ್ಷದ ಹಳೆಯದಾದ ದ್ರಾವಿಡ ಶೈಲಿಯ ನಂದಿ ದೇವಾಲಯ, ಶಿವ ಪಾರ್ವತಿ ಹಾಗೂ ಪ್ರಸಿದ್ಧ ಭೋಗ ನಂದೀಶ್ವರ ದೇವಾಲಯ ಕಾಣಸಿಗುತ್ತವೆ.[ಬೆರಳ ತುದಿಯಲ್ಲಿ ಚಿತ್ತಾಕರ್ಷಕ ನಂದಿಗಿರಿಧಾಮ]
ಎರಡನೇ ದೊಡ್ಡ ಬೆಟ್ಟ
ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,479 ಕಿ.ಮೀ ಎತ್ತರದಲ್ಲಿದೆ. ಇದು ಭಾರತದ ಎರಡನೇಯ ದೊಡ್ಡ ಬೆಟ್ಟ. ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ.
ಯೋಗಾಸನ ಮಾಡುವಾಗ ವಹಿಸಬೇಕಾದ ಮುಂಜಾಗ್ರತೆ
ಬೆಳಿಗ್ಗೆ ಅಥವಾ ಸಂಜೆ ಯೋಗಾಸನ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಯೋಗಾಸನ ಮಾಡಬೇಕು, ಮನೆಯಲ್ಲಿಯೇ ಮಾಡಬಹುದು. ಆಯಾಸದ ಸಮಯದಲ್ಲಿ ಯೋಗಾಸನ ಮಾಡಬಾರದು. ಕೈ ಕಾಲಿನ ಉಗುರುಗಳು ಇರಬಾರದು. ಯೋಗದ ಮಾಡಿದ ಅರ್ಧಗಂಟೆಯ ಬಳಿಕ ಆಹಾರ ಸೇವನೆ ಮಾಡಬೇಕು.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಪ್ರಾಣಾಯಾಮ ಎಂದರೇನು?
ಪ್ರಾಣವನ್ನು ನಿಗ್ರಹ ಮಾಡುವುದನ್ನೇ ಪ್ರಾಣಾಯಮ ಎನ್ನುತ್ತಾರೆ. ಪ್ರಾಣಾಯಮವು ಶ್ವಾಸಕೋಶದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಿದ್ದು, ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಮೂಗಿನ ಮೂಲಕ ಬಿಡಲಾಗುತ್ತದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶ ಹಿಗ್ಗುಕುಗ್ಗುವಿಕೆಗೆ ಒಳಗಾಗುವುದರಿಂದ ದೇಹದೊಳಗಿನ ದೂಷಿತ ವಾಯು ಹೊರಹೋಗಿ ಶುದ್ಧಗಾಳಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ.
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ
ಇತ್ತೀಚಿನ ದಿನಗಳಲ್ಲಿ ಮಹಿಳೆಯರೇ ಯೋಗದ ಕುರಿತಾಗಿ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂಬುದು ಈ ಯೋಗಶಿಬಿರದಿಂದ ತಿಳಿದು ಬಂದಿತು.
ಆರೋಗ್ಯ ಮತ್ತು ಸೌಂದರ್ಯ ಒಂದೇ ಸೂರಿನಲ್ಲಿ
ಶ್ರೀ ಯೋಗ ಕೇಂದ್ರ ಆಯೋಜಿಸಿದ್ದ ಯೋಗ ಶಿಬಿರ ಸೌಂದರ್ಯ ಮತ್ತು ಆರೋಗ್ಯವನ್ನು ಒಂದೇ ಸೂರಿನಡಿಯಲ್ಲಿ ತಂದಿತ್ತು. ಬೆಟ್ಟದ ಸೌಂದರ್ಯ ಸವಿಯಲು ಬಂದ ಬಹಳಷ್ಟು ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಕಾರಣರಾದರು.