ದಕ್ಷಿಣ ಭಾರತದ ಮೊದಲ 'ಎಲಿವೇಟೆಡ್ ಸ್ಕೈವಾಕ್' ವಿಶೇಷತೆಗಳೇನು ಗೊತ್ತಾ?
ದಕ್ಷಿಣ ಭಾರತದ ಮೊತ್ತ ಮೊದಲ 'ಎಲಿವೇಟೆಡ್ ಸ್ಕೈವಾಕ್' ಜಯನಗರದ ಮೂರನೇ ಬಡಾವಣೆಯಲ್ಲಿ ಉದ್ಘಾಟನೆಯಾಗಿದೆ. ಇದರಲ್ಲಿ ಮೂರು ಲಿಫ್ಟ್ ಗಳಿದ್ದು ಬರೋಬ್ಬರಿ 2 ಕೋಟಿ ಖರ್ಚು ಮಾಡಲಾಗಿದೆ.
ಬೆಂಗಳೂರು, ಜನವರಿ 31: ದಕ್ಷಿಣ ಭಾರತದ ಮೊಟ್ಟ ಮೊದಲ 'ಎಲಿವೇಟೆಡ್ ಸ್ಕೈವಾಕ್' ಜಯನಗರದ ಮೂರನೇ ಬಡಾವಣೆಯಲ್ಲಿ ಉದ್ಘಾಟನೆಯಾಗಿದೆ. ಹಲವು ವಿಶೇತೆಗಳಿರುವ ಅತ್ಯಾಧುನಿಕ ಸ್ಕೈವಾಕ್ ಇದಾಗಿದೆ.
ಬೆಂಗಳೂರಿನ ಹಲವು ಕಡೆಗಳಲ್ಲಿ ಈಗಾಗಲೇ ಸ್ಕೈವಾಕ್ ಗಳಿವೆ. ಆದರೆ ಅದ್ಯಾವುದರಲ್ಲೂ ಇಲ್ಲದ ಹಲವು ವಿಶೇಷತೆಗಳು ಈ ದಾ.ರಾ.ಬೇಂದ್ರೆ ಗಗನ ಮಾರ್ಗದಲ್ಲಿದೆ. ಬೆಂಗಳೂರಿನ ಹಲವು ಸ್ಕೈವಾಕ್ ಗಳಲ್ಲಿ ಮೆಟ್ಟಿಲು ಹತ್ತಲು ಜನ ಹಿಂದೇಟು ಹಾಕುತ್ತಾರೆ. ಹೀಗಾಗಿ ಹೆಚ್ಚಿನವು ಬಳಸದೇ ಹಾಗೇ ಪಾಳು ಬಿದ್ದಿವೆ. ಆದರೆ ಈ ಸ್ಕೈವಾಕ್ ಆ ರೀತಿ ಆಗಬಾರದು ಅಂತ ಕಾರ್ಪೊರೇಟರ್ ಮತ್ತು ನಿರ್ಮಾಣ ಸಂಸ್ಥೆಯವರು ಜಂಟಿಯಾಗಿ ಮಾಸ್ಟರ್ ಪ್ಲಾನಿನಿಂದ ಇದನ್ನು ನಿರ್ಮಾಣ ಮಾಡಿದ್ದಾರೆ.[ಈ ಟ್ರಾಫಿಕ್ ಪೊಲೀಸ್ ತೋರಿದ ಮಾನವೀಯತೆ ಎಂತದ್ದು ನೋಡಿ!]
ಮೂರು ರಸ್ತೆ ಸಂಪರ್ಕಿಸುವ ಮೊದಲ ಸ್ಕೈವಾಕ್
ಈ ಸ್ಕೈವಾಕ್ ನಿಂದ ಜಯನಗರದ ಜನತೆಗೆ ರಸ್ತೆ ದಾಟುವುದು ಸುಲಭವಾಗಲಿದೆ. 22ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ ಮತ್ತು ಆನೆಬಂಡೆ (ಎಲಿಫೆಂಟ್ ರಾಕ್)ರಸ್ತೆ ದಾಟಲು ಪಾದಚಾರಿಗಳಿಗೆ ಅನುಕೂಲವಾಗಲಿದೆ.. ಮೂರು ರಸ್ತೆಗಳನ್ನು ದಾಟಬಹುದಾದ ಬೆಂಗಳೂರಿನ ಮೊದಲ ಸ್ಕೈವಾಕ್ ಇದಾಗಿದೆ ಎಂದು ಕಾರ್ಪೊರೇಟರ್ ಎನ್.ಆರ್.ರಮೇಶ್ ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಮೇಯರ್ ಪದ್ಮಾವತಿ ಸ್ಕೈವಾಕ್ ಉದ್ಘಾಟನೆ ಮಾಡಿದರು.
ಲಿಫ್ಟ್ ಇರುವ ಮೊದಲ ಸ್ಕೈವಾಕ್
ಜನರಿಗೆ ಮೆಟ್ಟಿಲು ಹತ್ತಲು ಕಷ್ಟವಾಗಬಾರದು ಎಂಬ ಕಾರಣಕ್ಕೆ ಈ ಗಗನ ಮಾರ್ಗಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಮೂರು ರಸ್ತೆಗಳಿಗೆ ಒಟ್ಟು ಮೂರು ಲಿಫ್ಟ್ ಗಳಿವೆ. 16 ಜನ ಒಮ್ಮೆಗೆ ಹೋಗಬಹುದಾದ ಎರಡು ಲಿಫ್ಟ್ ಗಳು ಮತ್ತು 8 ಜನ ಒಮ್ಮೆಗೆ ಹೋಗಬಹುದಾದ ಲಿಫ್ಟ್ ಇದರಲ್ಲಿದೆ. ಇದರಿಂದ ಹಿರಿಯರು ಮತ್ತು ವಿಶೇಷ ಚೇತನರಿಗೂ ಬಹಳ ಅನುಕೂಲವಾಗಿದೆ.
DBOOT ಯೋಜನೆಯಲ್ಲಿ ನಿರ್ಮಾಣ
ಈ ಸ್ಕೈವಾಕ್ ಮತ್ತೊಂದು ವಿಶೇಷ ಎಂದರೆ ಇದನ್ನು ಬಿಬಿಎಂಪಿಯ ಹಣದಲ್ಲಿ ನಿರ್ಮಾಣ ಮಾಡಿಲ್ಲ. DBOOT (Design, Built, Own, Operate & Transfer) ಯೋಜನೆಯಡಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಪ್ರಕಾಶ್ ಆರ್ಟ್ಸ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದ್ದು 20 ವರ್ಷಗಳ ಕಾಲ ನಿರ್ವಹಿಸಲಿದೆ.
ಸ್ಕೈವಾಕ್ ನಿಂದ ಬಿಬಿಎಂಪಿಗೆ ಭರ್ಜರಿ ಆದಾಯ
ಸ್ಕೈವಾಕ್ ನಿರ್ಮಾಣಕ್ಕಾಗಿ ಪ್ರಕಾಶ್ ಆರ್ಟ್ಸ್ ಬರೋಬ್ಬರಿ 2 ಕೋಟಿ ಖರ್ಚು ಮಾಡಿದೆ. ಈ ಸ್ಕೈವಾಕ್ ನಿಂದ ಬಿಬಿಎಂಪಿ ವರ್ಷಕ್ಕೆ 14 ಲಕ್ಷ ಆದಾಯ ಪಡೆಯಲಿದೆ. 10,80,000 ರೂಪಾಯಿ ನೆಲ ಬಾಡಿಗೆ ರೂಪದಲ್ಲಿ ಹಾಗೂ 3,20,000 ಜಾಹೀರಾತು ಶುಲ್ಕದ ರೂಪದಲ್ಲಿ ಸಂಸ್ಥೆಯೇ ಬಿಬಿಎಂಪಿಗೆ ಹಣ ಪಾವತಿ ಮಾಡಲಿದೆ.
ದಾ.ರಾ.ಬೇಂದ್ರೆ ಗಗನಮಾರ್ಗ
ದಾ.ರಾ ಬೇಂದ್ರೆಯವರ 121 ಜನ್ಮ ದಿನಾಚರಣೆಯಂದೇ ಗಗನಮಾರ್ಗ ಉದ್ಘಾಟನೆಯಾಗಿದ್ದು, ವರಕವಿ ಸ್ಮರಣಾರ್ಥ ಸ್ಥಳದಲ್ಲಿ ಕಂಚಿನ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ. ದಾ.ರಾ ಬೇಂದ್ರೆಯವರ ಗೌರವಾರ್ಥ ಬಿಬಿಎಂಪಿಯ ಕಡೆಯಿಂದ ಈ ಪುತ್ಥಳಿ ಸ್ಥಾಪಿಸಲಾಗಿದೆ.