ಉತ್ತರ-ದಕ್ಷಿಣ ಬೆಸೆಯುವ ಮೆಟ್ರೋ ಸುರಂಗ ಮಾರ್ಗದ ಟ್ರಯಲ್ ರನ್ ಶುರು!
ಬೆಂಗಳೂರು, ಮಾರ್ಚ್ 03: ಬಹುನಿರೀಕ್ಷಿತ ಬೆಂಗಳೂರು ಉತ್ತರ-ದಕ್ಷಿಣ ನಮ್ಮ ಮೆಟ್ರೋ ಸುರಂಗ ಮಾರ್ಗದ ಟ್ರಯಲ್ ರನ್ ಈ ಭಾನುವಾರ(ಮಾರ್ಚ್ 05)ದ ನಂತರ ಆರಂಭವಾಗಲಿದೆ. ಫೆಬ್ರವರಿ ಅಂತ್ಯದ ವೇಳೆಗಾಗಲೇ ಈ ಮಾರ್ಗದಲ್ಲಿ ಟ್ರಯಲ್ ರನ್ ಶುರುಮಾಡುವುದಾಗಿ ಬಿಎಂ ಆರ್ ಸಿಎಲ್ ಹೇಳಿತ್ತಾದರೂ ಕೆಲ ತಾಂತ್ರಿಕ ದೋಷದಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಸುರಂಗ ಮಾರ್ಗದಲ್ಲಿನ ತಾಂತ್ರಿಕ ದೋಷದಿಂದಾಗಿ ಈಗಾಗಲೇ ಈ ಭಾಗದಲ್ಲಿ ಮೆಟ್ರೋ ಸೇವೆ ವಿಳಂಬವಾಗಿದ್ದು, ಏಪ್ರಿಲ್ ಹೊತ್ತಿಗೆ ಮೆಟ್ರೋ ಓಡಾಟ ಆರಂಭವಾಗುವ ನಿರೀಕ್ಷೆ ಇದೆ. ಈ ಮೂಲಕ ನಮ್ಮ ಮೆಟ್ರೋ ಮೊದಲ ಹಂತ ಪೂರ್ಣಗೊಂಡಂತಾಗುತ್ತದೆ.[ಮೆಟ್ರೋ ಭದ್ರತಾ ಮುಖ್ಯಸ್ಥರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ?]
ಉತ್ತರ ಕಾರಿಡಾರ್ ನ ಸಂಪಿಗೆ ರಸ್ತೆಯಿಂದ ಮತ್ತು ದಕ್ಷಿಣ ಕಾರಿಡಾರ್ ನ ನ್ಯಾಶನಲ್ ಕಾಲೇಜಿನಿಂದ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ಗ್ರೀನ್ ಲೈನ್ ಸುರಂಗ ಮಾರ್ಗ ಇದಾಗಿದ್ದು, ಪರ್ಪಲ್ ಲೈನ್ ಮೆಟ್ರೋದ ಉಪಯೋಗ ಪಡೆಯುತ್ತಿರುವ ಜನರ ಮೂರು ಪಟ್ಟು ಹೆಚ್ಚು ಜನ ಗ್ರೀನ್ ಲೈನ್ ನ ಉಪಯೋಗ ಪಡೆಯಬಹುದೆಂದು ಅಂದಾಜಿಸಲಾಗಿದೆ.[ಮೆಟ್ರೋ ಪಾಲಿಟಿಕ್ಸ್: ಪಿಎಂ ಪೂಜೆ ನಡೆಸುವ ಮುನ್ನ ಕಾಂಗ್ರೆಸ್ ಪೂಜೆ]
ಕೇಂದ್ರ ರೈಲ್ವೆ ಸುರಕ್ಷತೆ ಆಯುಕ್ತರ ಬಳಿಯಿಂದ ಅನುಮತಿ ಪಡೆದ ನಂತರ ಬಿಎಂಆರ್ ಸಿಎಲ್ ಉದ್ದೇಶಿತ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ 24 ಕಿಲೋಮೀಟರ್ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ 8 ಕಿಲೋಮೀಟರ್ ಸಂಚಾರಕ್ಕಾಗಿ ಪ್ರಯಾಣಿಕರು ಕಾದಿದ್ದಾರೆ. ಅದರಲ್ಲೂ ಮೆಜೆಸ್ಟಿಕ್, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಮುಕ್ತಾಯ ಕಾಣಬೇಕಿದೆ.(ಒನ್ಇಂಡಿಯಾ ಸುದ್ದಿ)