ಬೆಂಗಳೂರು ಟ್ರಾಫಿಕ್ ಗೆ ಮುಕ್ತಿ, ಸುರಂಗ ನಿರ್ಮಾಣದತ್ತ ಸರಕಾರ
ಸುರಂಗ ರಸ್ತೆ ನಿರ್ಮಾಣಕ್ಕೆ 8-9 ಸಾವಿರ ಕೋಟಿ ತಗುಲಲಿದೆ ಎನ್ನಲಾಗಿದೆ. ಈ ಸಂಬಂಧ ಬಲ್ಗೇರಿಯಾ ಮೂಲದ ಕಂಪೆನಿಯೊಂದರ ಜತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 25: ಉಕ್ಕಿನ ಮೇಲ್ಸೇತುವೆ ಆಯ್ತು, ಎಲಿವೇಟೆಡ್ ಕಾರಿಡಾರ್ ಆಯ್ತು ಇದೀಗ ಬೆಂಗಳೂರಿನಲ್ಲಿ ನಾಲ್ಕು ಸುರಂಗ ಮಾರ್ಗ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ.
ಕುಮಾರ ಕೃಪಾ ರಸ್ತೆಯಿಂದ ಹೆಬ್ಬಾಳ ಜಂಕ್ಷನ್ ವರೆಗೆ 6 ಕಿಲೋ ಮೀಟರ್, ನಾಯಂಡಹಳ್ಳಿ ಜಂಕ್ಷನ್ ನಿಂದ ಮೆಜೆಸ್ಟಿಕಿಲ್ಲಿರುವ ಶಾಂತಲಾ ಸಿಲ್ಕ್ ಹೌಸ್ ವರೆಗಿನ 7 ಕಿಲೋ ಮೀಟರ್, ಗುರಗುಂಟೆಪಾಳ್ಯದಿಂದ ರಾಜ್ ಕುಮಾರ್ ಸಮಾಧಿವರೆಗಿನ 1 ಕಿಲೋ ಮೀಟರ್ ಹಾಗೂ ಜಾಲಹಳ್ಳಿಯಿಂದ ಏರ್ ಫೋರ್ಸ್ ಸ್ಟೇಷನ್ ವರೆಗಿನ 3 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ.[ಏಪ್ರಿಲ್ 23ಕ್ಕೆ ನಗರ ಕೇಂದ್ರ ಗ್ರಂಥಾಲಯದ ನವೀಕೃತ ಕಟ್ಡಡ ಉದ್ಫಾಟನೆ]
ಸುಮಾರು 8-9 ಸಾವಿರ ಕೋಟಿ ಈ ರಸ್ತೆ ನಿರ್ಮಾಣಕ್ಕೆ ತಗುಲಲಿದೆ ಎನ್ನಲಾಗಿದೆ. ಈ ಸಂಬಂಧ ಬಲ್ಗೇರಿಯಾ ಮೂಲದ ಕಂಪೆನಿಯೊಂದರ ಜತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದಾರೆ. ಇನ್ನು ಸದ್ಯದಲ್ಲೇ ಈ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಯನ್ನು ತಜ್ಞರು ತಯಾರಿಸುವ ಸಾಧ್ಯತೆಗಳಿವೆ.
ಒಂದೊಮ್ಮೆ ಈ ಸುರಂಗ ರಸ್ತೆ ನಿರ್ಮಾಣವಾದರೆ ದೇಶದ ನಾಲ್ಕನೇ ಅತೀ ದೊಡ್ಡ ಸುರಂಗ ರಸ್ತೆ ನಿರ್ಮಾಣವಾದಂತಾಗಲಿದೆ.[ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ]
ದೇಶದ ನಾಲ್ಕನೇ ಅತೀ ಉದ್ದ ಸುರಂಗ
ಏಷ್ಯಾದಲ್ಲೇ ಅತೀ ದೊಡ್ಡ 9 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟನೆಯಾಗಿತ್ತು. ಇದೀಗ ನಾಯಂಡಹಳ್ಳಿ ಜಂಕ್ಷನ್ ನಿಂದ ಮೆಜೆಸ್ಟಿಕ್ ಶಾಂತಲಾ ಸಿಲ್ಕ್ ಹೌಸ್ ವರೆಗಿನ 7 ಕಿಲೋ ಮೀಟರ್ ಉದ್ಧದ ಸುರಂಗ ನಿರ್ಮಾಣವಾದರೆ ದೇಶದ 4ನೇ ಅತೀ ಉದ್ದದ ಸುರಂಗ ಮಾರ್ಗ ಎನಿಸಿಕೊಳ್ಳಲಿದೆ.
ಯೋಜನೆ ವರದಿಗೆ ಅನುಮೋದನೆ
ಬಳ್ಳಾರಿ ರಸ್ತೆಯ ಮಣ್ಣಿನ ಪರೀಕ್ಷೆಯನ್ನು ಉಕ್ಕಿನ ಸೇತುವೆಗಾಗಿ ಈಗಾಗಲೇ ನಡೆಸಲಾಗಿದೆ. ಹೀಗಾಗಿ ತಕ್ಷಣವೇ ಯೋಜನಾ ವರದಿ ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು ಎಂದು ಕೆ.ಜೆ ಜಾರ್ಜ್ ನೈಜೀರಿಯಾ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ವರ್ಷದ ಅಂತ್ಯದ ಮೊದಲು ಯೋಜನೆ ಕೈಗೆತ್ತಿಕೊಳ್ಳುವುದು ಸರಕಾರದ ಯೋಜನೆಯಾಗಿದೆ.
ಹಣ ಹೊಂದಿಸುವುದೇ ಸವಾಲು
ಒಂದು ಕಿಲೋಮೀಟರ್ ಸುರಂಗ ರಸ್ತೆ ನಿರ್ಮಾಣಕ್ಕೆ 500 ಕೋಟಿ ಖರ್ಚಾಗಲಿದೆ. ಹೀಗೆ ಒಟ್ಟು ಈ ಸುರಂಗ ನಿರ್ಮಾಣಕ್ಕೆ ಬರೋಬ್ಬರಿ 8-9 ಸಾವಿರ ಕೋಟಿ ಖರ್ಚಾಗಲಿದೆ. ಹೀಗಾಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಇದರ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ವಾಹನ ದಟ್ಟಣೆ ಹೆಚ್ಚಿದ್ದಲ್ಲಿ ದ್ವಿಪಥ ನಿರ್ಮಿಸಬೇಕಾಗುತ್ತದೆ. ಹೀಗಾಗಿ ಖರ್ಷು ಹೆಚ್ಚಾಗಲಿದೆ. ಸುರಂಗ ನಿರ್ಮಾಣದ ಹಣವನ್ನು ಟೋಲ್ ಮೂಲಕ ಸಂಗ್ರಹಿಸುವ ಬಗ್ಗೆಯೂ ಚರ್ಚೆಯಾಗಿದೆ.
ಲಾಭಗಳೇನು?
ಸುರಂಗ ರಸ್ತೆ ನಿರ್ಮಾಣದಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿ ಹಾಗೂ ಕಟ್ಟಡಗಳಿಗೆ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮರಗಳನ್ನು ಕಡಿಯುವ ಪ್ರಮೇಯವೇ ಇಲ್ಲ. ಇನ್ನು ಟ್ರಾಫಿಕ್, ಸಿಗ್ನಲ್ ಗಳ ಸಮಸ್ಯೆಯೆಲ್ಲ ಇರುವುದಿಲ್ಲ. ಸುರಂಗ ರಸ್ತೆಯಲ್ಲಿ ವೇಗವಾಗಿ ಮತ್ತು ಸುಲಭವಾಗಿ ಸಂಚರಿಸಬಹುದು.
ಮೇಯರ್ ಹೇಳುವುದೇನು?
ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಕೆ.ಜೆ ಜಾರ್ಜ್ ನೇತೃತ್ವದ ಸಭೆಯಲ್ಲಿ ಟರ್ಕಿ, ಬಲ್ಗೇರಿಯಾ, ಸ್ವಿಟ್ಜರ್ಲೆಂಡ್, ಬ್ಯಾಂಕಾಕ್ ಪ್ರತಿನಿಧಿಗಳು ಭಾಗವಹಿಸಿ ಅನುಭವ ಹಂಚಿಕೊಂಡಿದ್ದರು. ಆರು ಜನರ ಬಲ್ಗೇರಿಯಾ ತಂಡ ಸುರಂಗ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆಯನ್ನೂ ಮಾಡಿದೆ ಎಂದು ಮೇಯರ್ ಪದ್ಮಾವತಿ ಹೇಳಿದ್ದಾರೆ.