ಕೆಂಗೇರಿಯ ಮನೆ ವಾರ್ಡ್ ರೋಬ್ ನಲ್ಲಿ ಮಹಿಳೆಯ ಅಸ್ಥಿಪಂಜರ
ಬೆಂಗಳೂರಿನ ಕೆಂಗೇರಿಯ ಮನೆಯೊಂದರ ವಾರ್ಡ್ ರೋಬ್ ನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಆ ಮನೆಯಲ್ಲಿ ಬಾಡಿಗೆಗಿದ್ದ ಶಿವಮೊಗ್ಗ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಸಂಜಯ್ ಎಂಬಾತನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು, ಮೇ 8: ಕೆಂಗೇರಿ ಸ್ಯಾಟಲೈಟ್ ಟೌನ್ ನ ಬೀಗ ಹಾಕಿದ್ದ ಮನೆಯೊಂದರ ವಾರ್ಡ್ ರೋಬ್ ನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಕೆಂಗೇರಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗಾಂಧಿನಗರದಲ್ಲಿ ಬಾಡಿಗೆಗೆ ನೀಡಿರುವ ಮನೆಯಿಂದ ದುರ್ನಾತ ಬರುತ್ತಿದೆ ಮಾಲೀಕರಾದ ನವೀನ್ ದೂರು ನೀಡಿದ್ದಾರೆ.
ಒಂದು ವರ್ಷದ ಬಾಡಿಗೆ ಕರಾರು ಮುಗಿದಿದೆ. ಬಾಡಿಗೆಗೆ ಪಡೆದಿದ್ದ ಶಿವಮೊಗ್ಗ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಸಂಜಯ್, ಆತನ ತಾಯಿ ಶಶಿಕಲಾ ಮತ್ತು ಅಜ್ಜಿ ಶಾಂತಕುಮಾರಿ ಕಳೆದ ಫೆಬ್ರವರಿಯಿಂದ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಕೋಣೆಗೆ ಬೀಗ ಹಾಕಿರುವುದು ಕಂಡುಬಂದಿದೆ.[ದೆಹಲಿಯ ಫ್ಲ್ಯಾಟ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ]
ಪ್ಲಾಸ್ಟರ್ ಹಾಕಿದ್ದ ವಾರ್ಡ್ ರೋಬ್ ನಿಂದ ದುರ್ನಾತ ಬಂದಿದೆ. ಅದನ್ನು ತೆರೆದು ನೋಡಿದಾಗ ನೆಲದ ಭಾಗ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಒಂದಿಷ್ಟು ಆಳಕ್ಕೆ ತೋಡಿದಾಗ ಅಸ್ಥಿ ಪಂಜರ ಪತ್ತೆಯಾಗಿದ್ದು, ಉದ್ದ ಕೂದಲು ಹಾಗೂ ಬಟ್ಟೆಯನ್ನು ಗಮನಿಸಿದ ಮೇಲೆ ಅದು ಮಹಿಳೆಯದು ಎಂದು ಗೊತ್ತಾಗಿದೆ.
ಆದರೆ, ಅದು ಶಶಿಕಲಾರದೇ ಅಥವಾ ಶಾಂತಕುಮಾರಿ ಅವರದೇ ಎಂಬುದು ಗೊತ್ತಾಗಿಲ್ಲ. ನವೀನ್ ನೀಡಿದ ಮಾಹಿತಿ ಪ್ರಕಾರ, ಫೆಬ್ರವರಿ ಎರಡರಂದು ತುರ್ತಾಗಿ ಐವತ್ತು ಸಾವಿರ ಬೇಕು ಎಂದು ಸಂಜಯ್ ಹಣ ತೆಗೆದುಕೊಂಡು ಹೋಗಿದ್ದಾನೆ. ಆತನ ಅಜ್ಜಿ ಶಾಂತಕುಮಾರಿ ಕೆಲವು ಸಂಬಂಧಿಕರ ಮನೆಗೆ ಭೇಟಿ ಕೊಡಬೇಕು. ಅಲ್ಲಿಂದ ಬಂದ ತಕ್ಷಣ ಹಣ ಹಿಂತಿರುಗಿಸುತ್ತೇವೆ ಎಂದಿದ್ದಾರೆ.[ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ವ್ಯಕ್ತಿಯ ಬರ್ಬರ ಹತ್ಯೆ]
ಅ ನಂತರ ಸಂಜಯ್ ಮತ್ತು ಆತನ ತಾಯಿ ಮನೆ ಮಾಲೀಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಪೊಲೀಸರ ಪ್ರಕಾರ ಸಂಜಯ್ ಮೇಲೆ ಶಂಕೆ ಇದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ.